ಬೆಳ್ತಂಗಡಿ; ಬಳಂಜ ಗ್ರಾಮದ ಕರ್ಮನ್ ದೊಟ್ಟು ಜನತಾ ಕಾಲನಿಯ ನಲ್ಲಿ ಬಾರಿ ಅಪಾಯಕಾರಿ ಧರೆ ಕುಸಿತದಿಂದಾಗಿ ನಾಲ್ಕು ಮನೆಗಳು ಬೀಳುವ ಸಾಧ್ಯತೆ ಇದ್ದು ಕುಟುಂಬಗಳನ್ನು ಗ್ರಾ.ಪಂ ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಸರಕಾರದಿಂದ ಕೊಟ್ಟಿರುವ ಜಾಗದಲ್ಲಿ ಇಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ಮನೆ ನಿರ್ಮಿಡಿಕೊಂಡಿದ್ದು ಕಡಿದಾದ ಬೆಟ್ಟ ಗುಡ್ಡದ ರೀತಿಯಲ್ಲಿ ಇದ್ದ ಜಾಗವನ್ನು ಸಮತಟ್ಟು ಮಾಡದೇ ಇಚ್ಛಾನುಸಾರ ಮನೆ ಕಟ್ಟಲು ಅವಕಾಶ ಮಾಡಿ ಕೊಡಲಾಗಿದೆ.
ಇದರಿಂದಾಗಿ ಇಲ್ಲಿ ಇದೀಗ ಭೂ ಕುಸಿತದ ಭೀತಿ ಎದುರಾಗಿದೆ. ಇದಲ್ಲದೇ ಕೆಳಗಿನ ಭಾಗದಲ್ಲಿ ಮನೆ ನಿರ್ಮಿಸುವ ವೇಳೆ ಜಾಗವನ್ನು ಜೆಸಿಬಿ ಮೂಲಕ ಸಮತಟ್ಟು ಮಾಡಿದ್ದು ಮೇಲಿನ ಭಾಗದಲ್ಲಿರುವ ಮನೆಗಳು ಕುಸಿಯುವ ಸ್ಥಿತಿಗೆ ಬಂದಿದೆ. ಮೇಲ್ಭಾಗದಲ್ಲಿ ಮನೆ ಕಟ್ಟಿರುವ ಆನಂದ ಆಚಾರ್ಯ,ಉಸ್ಮಾನ್ ರವರ ಮನೆಗಳು ಕುಸಿಯುತ್ತಿದ್ದು ಈ ಮನೆಗಳು ಬಿದ್ದಲ್ಲಿ ಕೆಳಗಿನಲ್ಲಿ ಇರುವ ಚಂದ್ರಹಾಸ ಹಾಗೂ ಚಂದ್ರಾವತಿ ಯವರ ಮನೆಗಳು ಸಹ ಕುಸಿದು ಬೀಳುವ ಸಾಧ್ಯತೆ ಇದೆ.

ಈ ಹಿನ್ನಲೆಯಲ್ಲಿ ಎಲ್ಲ ನಾಲ್ಕು ಕುಟುಂಬಗಳನ್ನೂ ತಾತ್ಕಾಲಿಕವಾಗಿ ಇಲ್ಲಿಂದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಬೆಳ್ತಂಗಡಿ ತಹಶೀಲ್ದರ್ ಪೃಥ್ವಿ ಸಾನಿಕಮ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು.
ಸ್ಥಳಕ್ಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ,ಅಧ್ಯಕ್ಷರಾದ ಶೋಭಾ ಕುಲಾಲ್, ಉಪಾಧ್ಯಕ್ಷ ಯಶೋಧರ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ. ಬಿ.ಅಮೀನ್, ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವಾರಾಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅಗತ್ಯಬನೆರವನ್ನು ನೀಡುವ ಭರವಸೆ ನೀಡಿದ್ದಾರೆ.

