Home ಅಪರಾಧ ಲೋಕ ದಿಡುಪೆ ಜಲಪಾತದಲ್ಲಿ ಅರಣ್ಯ ವಾಚರ್ ಮೇಲೆ ಹಲ್ಲೆ:ಹಣ ದೋಚಿ ಪರಾರಿ ಪ್ರಕರಣ ದಾಖಲು

ದಿಡುಪೆ ಜಲಪಾತದಲ್ಲಿ ಅರಣ್ಯ ವಾಚರ್ ಮೇಲೆ ಹಲ್ಲೆ:ಹಣ ದೋಚಿ ಪರಾರಿ ಪ್ರಕರಣ ದಾಖಲು

0
2

ಬೆಳ್ತಂಗಡಿ: ದಿಡುಪೆಯಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಜಲಪಾತ ಪ್ರವೇಶ ದ್ವಾರದಲ್ಲಿ ಪ್ರವೇಶ ಶುಲ್ಕದ ಡಿಜಿಟಲ್ ರಶೀದಿ ವಿಚಾರವಾಗಿ ಉಂಟಾದ ವಾಗ್ವಾದ ಹಲ್ಲೆ ಮತ್ತು ಹಣ ದೋಚಿದ ಘಟನೆ ಜು‌.19ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅರಣ್ಯ ಇಲಾಖೆಯ ಗುತ್ತಿಗೆ ವಾಚರ್ ಆಗಿರುವ ಗೋಪಾಲ (42) ಅವರು ದಿಡುಪೆ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರಿಂದ ಪ್ರವೇಶ ಶುಲ್ಕ ಸಂಗ್ರಹಿಸುವ ಕರ್ತವ್ಯ ನಿರ್ವಹಿಸುತ್ತಿದ್ದರು. ಮಧ್ಯಾಹ್ನ 15 ಯುವಕರು ಜಲಪಾತಕ್ಕೆ ಆಗಮಿಸಿದ್ದು, ಇಲಾಖೆಯ ನಿಯಮದಂತೆ ತಲಾ 200 ರೂ.ನಂತೆ ಒಟ್ಟು3,000 ರೂ. ನಗದು ಪಡೆದು ಕೈಬರಹದ ರಶೀದಿ ನೀಡಲಾಗಿತ್ತು. ಜತೆಗೆ ಪ್ರತಾಪ್ ಬನ್ಕಲ್ ಎಂಬಾತನ ಗುರುತಿನ ಚೀಟಿಯನ್ನು ಪಡೆದು ನೋಂದಣಿ ಪುಸ್ತಕದಲ್ಲಿ ದಾಖಲಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಜಲಪಾತ ವೀಕ್ಷಿಸಿ ಬಂದ ತಂಡ ಡಿಜಿಟಲ್ ರಶೀದಿ ನೀಡುವಂತೆ ಒತ್ತಾಯಿಸಿದೆ. ಆ ವೇಳೆ ಡಿಜಿಟಲ್ ರಶೀದಿ ಯಂತ್ರ ಕಾರ್ಯನಿರ್ವಹಿಸದ ಬಗ್ಗೆ ಗೋಪಾಲ ವಿವರಿಸಿದರೂ ಯುವಕರು ತಕರಾರು ಮುಂದುವರಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಪ್ರತಾಪ್ ಬನ್ಕಲ್ ಎಂಬಾತ ಗೋಪಾಲ ಅವರನ್ನು ತಡೆದು ನಿಲ್ಲಿಸಿ ಹಣ ಹಿಂತಿರುಗಿಸುವಂತೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾನೆ. ನಂತರ ಗೋಪಾಲ ಅವರ ಬಳಿ ಇದ್ದ 50,500 ರೂ. ನಗದು ಹೊಂದಿದ್ದ ಬ್ಯಾಗ್‌ ನ್ನು ಕಸಿದುಕೊಂಡು ಇತರರೊಂದಿಗೆ ಸ್ಥಳದಿಂದ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಗೋಪಾಲ ಅವರು ನೀಡಿದ ದೂರಿನ ಆಧಾರದ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ಬನ್ಕಲ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here