ಬೆಳ್ತಂಗಡಿ; ಜನ ನಂಬುವ ರೀತಿ ಕಾರಣ ನೀಡಿ ದುಡಿಯುವ ಜನರ ಐಕ್ಯತೆಯನ್ನು ಒಡೆಯುವುದು ದುಡಿಸುವ ವರ್ಗದ ರಾಜಕೀಯವಾಗಿದೆ ಮತ್ತು ಐಕ್ಯತೆ ಸಾಧಿಸಿ ನಮ್ಮ ಬದುಕನ್ನು ಉತ್ತಮ ಪಡಿಸಿಕೊಳ್ಳುವುದೇ ದುಡಿಯುವ ವರ್ಗದ ರಾಜಕೀಯ ಎಂದು ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾದ ಬಿ.ಎಂ.ಬಟ್ ಹೇಳಿದರು.
ಬೆಳ್ತಂಗಡಿ ತಾಲೂಕು ಕಚೇರಿ ಮೈದಾನದಲ್ಲಿ ಕಾರ್ಮಿಕ ದಿನಾಚರಣೆಯ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತಾಡುತ್ತಿದ್ದರು. ಅಮೇರಿಕಾದ ಚಿಕಾಗೋದಲ್ಲಿ 8 ಗಂಟೆಯ ಘೋಷಣೆಯ ಹೋರಾಟ ನಡೆಯುವುದನ್ನು ತಡೆಯಲು ಆಳುವ ವರ್ಗ ವಿದೇಶಿ, ಸ್ವದೇಶಿ ಕಾರ್ಮಿಕರು ಎಂದು ಕಾರ್ಮಿಕ ವರ್ಗವನ್ನು ಒಡೆದು ಆಳಲು ಪ್ರಯತ್ನಿಸಿತ್ತು. ಅದನ್ನು ಮೀರಿ ಮುನ್ನಡೆದ ಅಂದಿನ ಕಾರ್ಮಿಕರು ಹಕ್ಕು ಸವಲತ್ತುಗಳನ್ನು ಗಳಿಸಿಕೊಂಡರು. ಆದರೆ ಇಂದು ವಿದ್ಯಾವಂತ ವರ್ಗ ಜಾತಿ ಧರ್ಮದ ಹೆಸರಲ್ಲಿ ಆಳುವ ವರ್ಗ ಬಿಜೆಪಿ ಮೂಲಕ ಕಾರ್ಮಿಕ ವರ್ಗವನ್ನು ಒಡೆದು ಕಾರ್ಮಿಕ ಹಕ್ಕು ಸವಲತ್ತುಗಳ ಕಸಿಯುತ್ತಿರುವುದನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ ಎಂದರು. 1886 ರ ಮೇ 1ರಿಂದ ನಡೆದ ಆ ಹೋರಾಟದ ನೆನಪಿಗಾಗಿ ಮತ್ತು ನಮಗಾಗಿ ಹುತಾತ್ಮರಾದ ಎಲ್ಲ ಶ್ರಮಜೀವಿ ವರ್ಗದ ನಾಯಕರ ಆದರ್ಶಗಳ ನೆನಯುವುದೇ ಕಾರ್ಮಿಕ ದಿನಾಚರಣೆಯ ಮಹತ್ವ ಆಗಿದೆ ಎಂದರು. ಆದರೆ ಕೇಂದ್ರದ ನರೇಂದ ಮೋದಿ ನೇತೃತ್ವದ ಬಿಜೆಪಿ ಸರಕಾರ 8 ಗಂಟೆಯ ಕೆಲಸವನ್ನು 12 ಗಂಟೆಗೆ ಏರಿಸುವ ಮೂಲಕ ಮತ್ತು ಇದ್ದ ಹಲವು ಹಕ್ಕು ಸವಲತ್ತುಗಳ ಕಿತ್ತೆಸೆಯುವ ಮೂಲಕ ಕಾರ್ಮಿಕ ವರ್ಗಕ್ಕೆ ದ್ರೋಹ ಎಸಗಿ ಕಾರ್ಮಿಕ ದಿನಾಚರಣೆಯ ಮಹತ್ವವನ್ನೇ ಇಲ್ಲವಾಗಿಸಿದೆ ಎಂದರು. ರಾಜ್ಯದ ಕಾಂಗ್ರೇಸ್ ಸರಕಾರವೂ ಬಿಜೆಪಿ ತೋರಿಸಿದ ದಾರಿಯಲ್ಲಿಯೇ ನಡೆಯುತ್ತಾ ಕಾರ್ಮಿಕ ವಿರೋದಿ ದೋರಣೆಯನ್ನೇ ಜಾರಿ ಮಾಡುತ್ತಿದೆ ಎಂದರು.

ಬಹಿರಂಗ ಸಮಾವೇಶದ ಬಳಿಕ ಅಂಬೇಡ್ಕರ್ ಭವನದಲ್ಲಿ ಸಭಾಕಾರ್ಯಕ್ರಮ ನಡೆಯಿತು. ಸಭೆಯನ್ನುದ್ದೇಶಿಸಿ ಮಾತಾಡಿದ ಸಿಐಟಿಯು ದ.ಕ. ಜಿಲ್ಲಾ ಕಾರ್ಯದರ್ಶಿಗಳಲ್ಲಿ ಓರ್ವರಾದ ಈಶ್ವರಿ ಪದ್ಮುಂಜ ಅವರು ಕಾರ್ಮಿಕ ವರ್ಗದ ಹಿತವನ್ನು ರಕ್ಷಿಸಲು ಕಾರ್ಮಿಕ ವರ್ಗ ಒಗ್ಗಾಟಾಗಬೇಕು ಎಂದರು. ಕಾರ್ಮಿಕರಿಗೆ ಶೋಷಣೆ ನೋವು ತರುವುದಿಲ್ಲ ಬದಲಿಗೆ ಅವರಲ್ಲಿ ಶೋಷಿತ ಪ್ರಜ್ಞೆ ಮೂಡಿದರೆ ನೋವು ತರಿಸುತ್ತದೆ ಎಂದರು. ನಾವು ಎಲ್ಲರು ಪ್ರಜ್ಞಾವಂತರಾಗಿ ಶೋಷಣೆಯ ವಿರುದ್ದ ಸಿಡಿದೇಳುವವರಾಗಬೇಕು ಎಂದರು.
ಸಭೆಯನ್ನುದ್ದೇಶಿಸಿ ರೈತ ಸಂಘದ ಲಕ್ಷ್ಮಣ ಗೌಡ, ಆಶಾ ಸಂಘಟನೆಯ ಜಿಲ್ಲಾಧ್ಯಕ್ಷರಾದ ದೇವಕಿ, ಜೆ.ಎಂ.ಎಅಸ್ ಜಿಲ್ಲಾಧ್ಯಕ್ಷರಾದ ಕಿರಣಪ್ರಭಾ, ಡಿವೈಎಫ್.ಐ. ತಾಲೂಕು ಕಾರ್ಯದರ್ಶಿ ಅಭಿಷೇಕ್, ಎಸ್.ಎಫ್.ಐ. ಜಿಲ್ಲಾ ಕಾರ್ಯದರ್ಶಿ ವಿನುಶರಮಣ ಶುಭ ಕೋರಿ ಮಾತಾಡಿದರು. ಕಾರ್ಯಕರ್ತೆ ಅಪ್ಸರಾಲಿಯ ಸರಕಾರಕ್ಕೆ ಕಳುಹಿಸುವ ಮನವಿಯನ್ನು ಓದಿದದರು. ಸಿಐಟಿಯು ತಾಲೂಕು ಸಂಚಾಲಕರಾದ ಲೋಕೇಶ್ ಸ್ವಾಗತಿಸಿದರು. ಅಶ್ವಿತ ವಂದಿಸಿದರು. ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರ ಸಂಘದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಸಂಗಾತಿ ಗುಂಪು ಯೋಜನೆಯ ಗುಂಪುಗಳಿಗೆ ಲಾಭಾಂಶ ವಿತರಣೆ ಕೂಡಾ ನಡೆಯಿತು.