
ಬೆಳಾಲು: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಬೆಳಾಲು ಗ್ರಾಮ ಪಂಚಾಯತ್ ಜನಸ್ಪಂದನ ಸಭೆ ಡಿ. 8 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಬೀಮಂಡೆ ಪ್ರದೇಶದಲ್ಲಿ ಕುಡಿಯುವ ನೀರು ಟ್ಯಾಂಕ್ ನಿರ್ಮಿಸಲಾಗಿದೆ ಆದರೆ ಇನ್ನೂ ನೀರು ಪೂರೈಕೆ ಆಗಿಲ್ಲ , ಬೆಳಾಲು – ಮಂಗಳೂರು ಸಾರಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ, ಬೆಳಾಲಿನಲ್ಲಿ ಲೋ ವಾಲ್ ಟೇಜ್ ಸಮಸ್ಯೆಯಿದೆ ಹಾಗೆಯೇ ವನ್ಯಜೀವಿಗಳ ಉಪಟಳವಿದೆ ಎಂದು ಗ್ರಾಮಸ್ಥ ಸುರೇಶ್ ಭಟ್ ಹೇಳಿದರು.
ದೊಂಪದಪಲ್ಕೆ ಅಂಗನವಾಡಿ ಕೇಂದ್ರ ಆವರಣ ಗೋಡೆ ಮತ್ತು ಇಂಟರ್ ಲಾಕ್ ಅಳವಡಿಕೆಗೆ ಗ್ರಾಮಸ್ಥರು ಬೇಡಿಕೆ ಇಟ್ಟರು. ಕಳೆದ ಎರಡು ವರ್ಷದಲ್ಲಿ ತಾಲೂಕಿಗೆ ಎರಡು ಹೊಸ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಅನುದಾನ ಬಂದಿದೆ ಎಂದು ಶಾಸಕರು ಮಾಹಿತಿ ನೀಡಿದರು. ಬೆಳಾಲಿಗೆ ಪಶು ವೈದ್ಯರು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದಾಗ ತಾಲೂಕಿನಲ್ಲಿ ಒಟ್ಟು 3 ಮಂದಿ ಪಶು ವೈದ್ಯರು ಇರುವ ಬಗ್ಗೆ ಹೆಚ್ಚುವರಿ ಜವಾಬ್ದಾರಿಯ ಪಶು ವೈದ್ಯರು ತಿಳಿಸಿದರು. ಕೂಡಲಕೆರೆ – ಮುಂಡ್ರೋಟ್ಟು ರಸ್ತೆ ದುರಸ್ತಿಗೊಳಿಸಿ ಎಂದು ಗ್ರಾಮಸ್ಥರು ಹೇಳಿದಾಗ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರ್ವೇ ನಡೆಸಲು ಶಾಸಕರು ಸೂಚಿಸಿದರು.
ಪಲ್ಲಿತಡ್ಕ ಎಂಬಲ್ಲಿ ನೀರಿನ ಟ್ಯಾಂಕ್ ಸೋರುತ್ತಿದೆ ಎಂದು ಗ್ರಾಮಸ್ಥರು ಹೇಳಿದಾಗ ಅದನ್ನು ಪರಿಶೀಲಿಸಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ತಹಶೀಲ್ದಾರ್ ಪ್ರಥ್ವಿ ಸಾನಿಕಂ, ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗದೀಶ್,
ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.