
ಬೆಳ್ತಂಗಡಿ; ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ ಕಾಫಿ ಬೀಜ ತುಂಬಿದ್ದ ಚೀಲಗಳನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಐವರು ಆರೋಪಿಗಳನ್ನುಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಆಶ್ಲೇಷ ಭಟ್, ನಾರಾಯಣ ಶೆಟ್ಟಿಗಾರ್, ಮಿಧುನ್ ಕುಮಾರ್, ವಿಕಯ ಶೆಟ್ಟಿ, ಮಹಮ್ಮದ್ ಆಶ್ರಫ್ ಎಂಬವರಾಗಿದ್ದಾರೆ.
ಕಳವಾದ ಎಲ್ಲಾ 80 ಕಾಫಿ ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪಿರ್ಯಾದಿದಾರರಾದ ಪುತ್ತೂರು ಕಬಕ ನಿವಾಸಿ ತೃತೇಶ್ (29) ಅವರ ದೂರಿನಂತೆ, ಡಿ.3ರಂದು ಪಿರಿಯಾ ಪಟ್ಟಣದ ಕಾಫಿ ಕ್ಯೂರಿಂಗ್ ಕಂಪೆನಿಯಿಂದ ತಲಾ 60 ಕೆ.ಜಿ ತೂಕದ 320 ಬ್ಯಾಗ್ಗಳನ್ನು KA 19 AB 2258 ಲಾರಿಯಲ್ಲಿ ಲೋಡ್ ಮಾಡಿಕೊಂಡು ಮಂಗಳೂರಿಗೆ ತೆರಳುವ ವೇಳೆ, ರಾತ್ರಿ ಪುತ್ತೂರಿನ ಕಬಕ ನೆಹರೂ ನಗರದಲ್ಲಿ ಲಾರಿ ನಿಲ್ಲಿಸಿ ಮನೆಗೆ ತೆರಳಿದ್ದರು. ಡಿ.4ರಂದು ಮಂಗಳೂರಿನ ಬಂದರಿಗೆ ತಲುಪಿದಾಗ ಲಾರಿಯ ಹಿಂಭಾಗದ ಸೀಲ್ ತುಂಡಾಗಿದ್ದು, ತಪಾಸಣೆ ವೇಳೆ .21,44,000 ಮೌಲ್ಯದ 80 ಚೀಲಗಳು ಕಾಣೆಯಾಗಿರುವುದು ಪತ್ತೆಯಾಯಿತು.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿಗಳಾದ ಆಶ್ಲೇಷ ಭಟ್ ಹಾಗೂ ಅವರ ಸಹಚರರು ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾರ್, ವಿಜಯ ಶೆಟ್ಟಿ ಮತ್ತು ಮಹಮ್ಮದ್ ಅಶ್ರಫ್ ಸೇರಿ ಕೃತ್ಯ ಎಸಗಿರುವುದು ವಿಚಾರಣೆ ವೇಳೆ ಬಹಿರಂಗವಾಗಿದ್ದು
ಎಲ್ಲಾ ಐವರನ್ನೂ ಬಂಧಿಸಿದ್ದಾರೆ. ಕಳವಿಗೆ ಬಳಸಿದ ಎರಡು ಆಟೋ, ಒಂದು ಗೂಡ್ಸ್ ಟೆಂಪೋ ಹಾಗೂ ಕಳವಾದ 80 ಕಾಫಿ ಚೀಲಗಳನ್ನು ಪೊಲೀಸರು
ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ.