
ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ಹಾಗೂ ಸುಳ್ಳು ಆರೋಪಗಳ ವಿರುದ್ಧ ಜಾತ್ಯತೀತ ಜನತಾದಳವು “ಧರ್ಮಸ್ಥಳ ಸತ್ಯ ಯಾತ್ರೆ’ ಕೈಗೊಂಡಿದ್ದು ಇದೇ ರವಿವಾರ ಆ 31ರಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಗುರುವರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಆ. 31ರಂದು ಧರ್ಮಸ್ಥಳ ಸತ್ಯ ಯಾತ್ರೆ ಆರಂಭವಾಗುತ್ತದೆ. ಮೊದಲಿಗೆ ಹಾಸನದಲ್ಲಿ ಸೆಂಟರ್ ಮಾಡಿದ್ದೇವೆ. ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದು ಅಲ್ಲಿ ತಿಂಡಿ ವ್ಯವಸ್ಥೆ ಮಾಡಿದ್ದೇವೆ. ಅಲ್ಲಿಂದ ನೇತ್ರಾವತಿಗೆ ಹೋಗಿ ಅಲ್ಲಿಂದ ಧರ್ಮಸ್ಥಳದ ವರೆಗೆ ಪಾದಯಾತ್ರೆ ಮಾಡುತ್ತೇ ವೆ. ಅಲ್ಲಿ ವೇದಿಕೆ ರಚನೆ ಮಾಡಿದ್ದೇವೆ. ಅಲ್ಲಿಂದ ಕೆಲವು ಸಂದೇಶಗಳನ್ನು ನೀಡುತ್ತೇವೆ ಎಂದು ತಿಳಿಸಿದರು.
ಧರ್ಮಸ್ಥಳಕ್ಕೆ ಅಪಮಾನವೆಸಗಲು ಸರಕಾರ ಮುಂದಾಗಿದೆ. ನಾನು ಒಬ್ಬ ಭಕ್ತನಾಗಿ ಹಾಗೂ ನಮ್ಮ ಪಕ್ಷ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಧರ್ಮಸ್ಥಳ ಸತ್ಯ ಯಾತ್ರೆ ಮಾಡಿ, ವೀರೇಂದ್ರ ಹೆಗ್ಗಡೆ ಅವ ರನ್ನು ಭೇಟಿ ಮಾಡಿ ಅವರಿಗೆ ಬೆಂಬಲ ನೀಡುತ್ತೇವೆ ಎಂದರು.
ಕಳೆದ ಹಲವಾರು ದಿನಗಳಿಂದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಮಾನ ಹಾಗೂ ಹಲವಾರು ಅನುಮಾನಗಳಿಗೆ ರಾಜ್ಯ ಸರಕಾರ ಎಡೆ ಮಾಡಿಕೊಟ್ಟಿದೆ. ತರಾತುರಿಯಲ್ಲಿ ಎಸ್ಐಟಿ ರಚನೆ ಮಾಡಿದೆ. ಧರ್ಮಸ್ಥಳ ವಿಷಯದಲ್ಲಿ ಒಂದು ತಂಡವಾಗಿ ಪಿತೂರಿ ಮಾಡಿದ್ದನ್ನು ನೋಡಿದ್ದೇವೆ. ಒಬ್ಬನ ಹೇಳಿಕೆಯನ್ನ ಪರಿಗಣಿಸಿ ಎಸ್ಐಟಿ ಯನ್ನ ಯಾಕೆ ರಚನೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುಮಾರಣ್ಣ ದಿಲ್ಲಿಯಲ್ಲಿ ಇದ್ದರೂ ವೀರೇಂದ್ರ ಹೆಗ್ಗಡೆ ಜತೆ ಮಾತನಾಡಿ ನೈತಿಕ ಬೆಂಬಲ ನೀಡಿದ್ದಾರೆ ಎಂದರು.
ಧರ್ಮಸ್ಥಳ ಪ್ರಕರಣದಲ್ಲಿ ಸರಕಾರ ತನಿಖೆ ಯಾವ ರೀತಿ ಮಾಡಿದ್ದಾರೆ. ಪಾರದರ್ಶಕವಾಗಿ ತನಿಖೆ ನಡೆದಿದೆಯೇ? ಇದರ ಹಿಂದೆ ಯಾರಿದ್ದಾರೆ. ಈ ಕಥಾನಕದ ಹಿಂದೆ ಇರುವ ಕಥೆ, ಚಿತ್ರಕಥೆ, ನಿರ್ಮಾಪಕ ಯಾರು ಅಂತ ಪತ್ತೆ ಮಾಡಬೇಕು. ಇದನ್ನ ಪತ್ತೆ ಮಾಡಬೇಕಾದರೆ ಎನ್ಐಎ ತನಿಖೆ ನಡೆಯಬೇಕು. ಧರ್ಮಸ್ಥಳ ಮಂಜುನಾಥನಿಗೆ ಕೋಟ್ಯಂತರ ಭಕ್ತರು ಇದ್ದಾರೆ. ನಾವು ಅವರ ಜತೆಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.