
ಬೆಳ್ತಂಗಡಿ : ಅಕ್ರಮವಾಗಿ ಕಾಡು ಪ್ರಾಣಿ ಬೇಟೆಯಾಡಿ ಬಂದು ಮನೆಯ ಶೆಡ್ ನಲ್ಲಿ ಮಾಂಸ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯ ಇಲಾಖೆ ದಾಳಿ ಮಾಡಿ ಕಾಡು ಪ್ರಾಣಿ ಮಾಂಸ ಸೇರಿದಂತೆ ಪರಿಕರಗಳನ್ನು ವಶಪಡಿಸಿಕೊಂಡ ಘಟನೆ ಜುಲೈ 12 ರಂದು ರಾತ್ರಿ ನಡೆದಿದ್ದು ಜುಲೈ 13 ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ಜೋಸ್ಸಿ ಅಲ್ವಿನ್ ಲೋಬೋ ಎಂಬವರ ಮನೆಯಲ್ಲಿ ಕಾಡುಪ್ರಾಣಿ ಬೇಟೆ ಮಾಡಿ ಮಾಂಸ ತಯಾರಿಸುತ್ತಿದ್ದರು.
ದಾಳಿ ವೇಳೆ ಬೇಟೆಯಾಡಿ ಕಾಡು ಪ್ರಾಣಿ ಸಾಗಾಟಕ್ಕೆ ಬಳಸಿದ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಕುಲಾಯಿ ಮೇಗಿನ ಮನೆ ನಿವಾಸಿ ಶರತ್ ಶೆಟ್ಟಿ ಎಂಬಾತನಿಗೆ ಸೇರಿದ ರಕ್ತದ ಕಲೆಗಳಿದ್ದ KA-21-P-0345 ನಂಬರಿನ ಬಿಳಿ ಬಣ್ಣದ ಈಯೊನ್ ಕಾರು ,ಒಂದು ಸಿಂಗಲ್ ಬ್ಯಾರಲ್ ಕೋವಿ, ಒಂದು ಕತ್ತಿ, 17 ಕೆ.ಜಿ ಕಾಡು ಪ್ರಾಣಿ ಮಾಂಸ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಕಾಡುಪ್ರಾಣಿ ಮಾಂಸವನ್ನು ಖಚಿತ ಪಡಿಸಿ ವರದಿಗಾಗಿ ಪ್ರಯೋಗಾಲಯಕ್ಕೆ ಅರಣ್ಯಾಧಿಕಾರಿಗಳು ಕಳುಹಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಆರೋಪಿಗಳಾದ ಜೋಸ್ಸಿ ಅಲ್ವಿನ್ ಲೋಬೋ ಮತ್ತು ಶರತ್ ಶೆಟ್ಟಿ ವಿರುದ್ಧ ಜುಲೈ 13 ರಂದು ವನ್ಯಜೀವಿ ಅಪರಾಧ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್.ಟಿ.ಎನ್ , ಡಿ.ಆರ್.ಎಫ್.ಒ ಸಂದೀಪ್,ರಾಘವೇಂದ್ರ,ಕಿರಣ್ ಪಾಟೀಲ್ , ಕಮಲ, ಬೀಟ್ ಫಾರೆಸ್ಟರ್ ಪಾರಶುರಾಮ್ ಮೇಟಿ ,ಚಾಲಕ ದಿವಕರ್ ಭಾಗವಹಿಸಿದರು.