ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ತಾಲೂಕಿನಾದ್ಯಂತ ಗ್ರಾಮಪಂಚಾಯತು ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಗ್ರಾ.ಪಂ ಅಧಿಕಾರಿಗಳ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿ ಗ್ರಾಮಪಂಚಾಯತಿನ ಎದುರು ನಡೆದ ಪ್ರತಿಭಟನೆಗಳಲ್ಲಿ ಪಕ್ಷದ ಸ್ಥಳೀಯ ಮುಖಂಡರುಗಳು ಜನಪ್ರತಿನಿಧಿಗಳು ಭಾಗವಹಿಸಿ ಸರಜಾರ ಅನುಸರಿಸುತ್ತಿರುವ ನೀತಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಬೆಳ್ತಂಗಡಿ ಪಟ್ಟಣ ಪಂಚಾಯತಿನ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ
ಪಟ್ಟಣ ಪಂಚಾಯತು ಅಧ್ಯಕ್ಷ ಹಾಗೂ ಬಿಜೆಪಿ ತಾಲೂಕು ಕಾರ್ಯದರ್ಶಿ ಜಯಾನಂದ ಅವರು ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿದ್ದು, ರಾಜ್ಯದಲ್ಲಿ ಭೂಮಾಫಿಯ, ಪಟ್ಟಭದ್ರ ಹಿತಾಸಕ್ತಿಗಳಿಂದ ಜನರಿಗೆ ಸುಲಭ ರೀತಿಯ ಸೇವೆ ದೊರಕದೆ ಭ್ರಷ್ಟಚಾರದ ಕೂಪದಿಂದ ಶ್ರೀಸಾಮಾನ್ಯನ ಹಣ ದೋಚಲು ಅವೈಜ್ಞಾನಿಕ ನಿಯಮ ರೂಪಿಸಿ ಅಲೆದಾಟದ ಭಾಗ್ಯ ಒದಗಿಸಿರುವುದನ್ನು ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ನಗರ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದರು.
ಪಟ್ಟಣವಾಸಿಗಳಿಗೆ ನೀಡುತ್ತಿದ್ದ ಪಂಚಾಯತ್ ಸೇವೆಗಳನ್ನು ಕಠಿಣಗೊಳಿಸಿದ ಪರಿಣಾಮ ಇಂದು ಜನಸಾಮಾನ್ಯರು ನಿವೇಶನಕ್ಕೆ ಬಿಖಾತೆ ಕೊಟ್ಟರೂ, ಸಮಸ್ಯೆ ಉಂಟಾಗಿ ಅನುಮತಿ ಸಿಗದೆ ಮನೆ ನಿರ್ಮಾಣಕ್ಕೆ ಗೃಹ ಮಂಡಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅದೇ ರೀತಿ ಕಟ್ಟಡಕ್ಕೆ ಸೂಕ್ತ ಪರವಾನಿಗೆ ನೀಡದೆ ಅವೈಜ್ಞಾನಿಕ ಕಾರಣ ನೀಡುವುದರಿಂದ ಮನೆ ನಿರ್ಮಾಣಕ್ಕೆ ಮನೆ ನಂಬ್ರ ನೀಡದಿರುವುದು, ವಿದ್ಯುತ್ ಸಂಪರ್ಕ ನಿರಾಕರಿಸುವುದು ಜನತೆಯ ದೈನಂದಿನ ಜೀವನಕ್ಕೆ ಬಹಳಷ್ಟು ಸಮಸ್ಯೆಯಾಗಿದೆ ಎಂದು ಆರೋಪಿಸಿದರು.
ಈ ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಂಗದ ಮುಖ್ಯಸ್ಥರಾದ ರಾಜ್ಯಪಾಲರು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ಜನಪರ ಸೇವೆ ಸುಲಲಿತವಾಗಿ ದೊರೆಯುವಂತಾಗಲು ಕಾರಣೀಕರ್ತರಾಗಬೇಕೆಂದು ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ನಗರ ಘಟಕದ ಪರವಾಗಿ ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು. ನಂತರ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮುಖ್ಯಾಧಿಕಾರಿ ರಾಜೇಶ್ ಅವರ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.