ಬೆಳ್ತಂಗಡಿ; ಕಲ್ಪತರು ನರ್ಸಿಂಗ್ ಸ್ಕೂಲ್ ಜೂನ್ 23 ರಂದು ಶ್ರದ್ಧೆಯೊಂದಿಗೆ ಲ್ಯಾಂಪ್ ಲೈಟಿಂಗ್ ಮತ್ತು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಲಾರೆನ್ಸ್ ಮುಕ್ಕುಯಿಯವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ತಮ್ಮ ಆಶೀರ್ವಚನ ನೀಡಿ ಮಾತನಾಡುತ್ತಾ “ನೀವು ಇಂದು ಈ ದೀಪವನ್ನು ಮಾತ್ರವಲ್ಲ, ರೋಗಿಗಳಿಗಾಗಿ ಪ್ರೀತಿಯ ದೀಪವನ್ನೂ ಬೆಳಗಿಸಲು ಕರೆಹೊಂದಿದವರಾಗಿದ್ದೀರಿ. ಈ ಸೇವೆಗೆ ಸಮರ್ಪಿತ ಮನಸ್ಸು ಅತ್ಯಗತ್ಯ. ಈ ದೀಪ ನಿಮ್ಮ ಜೀವನದ ದಿಕ್ಕನ್ನು ತೋರಿಸುವ ಬೆಳಕು ಆಗಲಿ” ಎಂದು ಆಶೀರ್ವದಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಂಜಾತ್, ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾ. ಜೋಸ್ ವಲಿಯಪರಂಬಿಲ್ ಇತರ ಗಣ್ಯರು, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯರು ವಿದ್ಯೆಯ ದೀಪ ಬೆಳಗಿಸಿ ನರ್ಸಿಂಗ್ ಸೇವೆಗೆ ತಮ್ಮ ಪ್ರತಿಜ್ಞಾ ವಿಧಿಯನ್ನು ವಾಚಿಸಿದರು. ವಿದ್ಯಾರ್ಥಿಗಳಿಗೆ ಪೋಷಕರು, ಬಂಧುಮಿತ್ರರು ಹಾಗೂ ಶಿಕ್ಷಕರು ಹಾರೈಕೆ ಸಲ್ಲಿಸಿದರು. ಕಲ್ಪತರು ನರ್ಸಿಂಗ್ ಸ್ಕೊಲಿನ ಪ್ರಾಂಶುಪಾಲರಾದ ಚಂದ್ರಿಕಾರವರು ಪ್ರತಿಜ್ಞೆಯನ್ನು ಹೇಳಿಕೊಟ್ಟರು.
