

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವಿಭಾಗದ ಮಲವಂತಿಗೆ ಗ್ರಾಮದ ಬಂಗಾರಪಲಿಕೆ ಪರಿಸರದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.
ಇಲ್ಲಿನ ಬಂಡೆಕಲ್ಲುಗಳು ಮತ್ತು ಕಡಿದಾದ ಪ್ರದೇಶದ ಹುಲ್ಲುಗಾವಲಿಗೆ ಬೆಂಕಿ ಹತ್ತಿಕೊಂಡು ಉರಿಯುತ್ತಿದೆ. ಅತ್ಯಂತ ದುರ್ಗಮ ಪ್ರದೇಶವಾದ ಇಲ್ಲಿ ಬೆಂಕಿ ಹತೋಟಿಗೆ ತರುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗದವರು ಬೆಂಕಿಯನ್ನು ಹತೋಟಿಗೆ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆ ಹಲವು ಕಿ.ಮೀ ದೂರದವರೆಗೂ ಕಂಡು ಬರುತ್ತಿದ್ದು ಹತ್ತಾರು ಎಕ್ರೆ ಪ್ರದೇಶ ಬೆಂಕಿಗೆ ಆಹುತಿಯಾಗಿರುವುದು ಹೊರ ನೋಟಕ್ಕೆ ಕಂಡು ಬರುತ್ತಿದೆ.

ಇದೀಗ ಬೆಂಕಿ ಹುಲ್ಲುಗಾವಲನ್ನು ಮಾತ್ರ ಆವರಿಸಿಕೊಂಡಿದ್ದು ದಟ್ಟವಾದ ಅರಣ್ಯಕ್ಕೆ ಬೆಂಕಿ ಇನ್ನೂ ವ್ಯಾಪಿಸಿಲ್ಲ. ಆದರೆ ಈಗ ಹುಲ್ಲು ಗಾವಲಿನಲ್ಲಿರುವ ಬೆಂಕಿ ದಟ್ಟ ಅರಣ್ಯಕ್ಕೆ ಹೊಕ್ಕರೆ ಅದು ದೊಡ್ಡ ಅನಾಹುತಗಳಿಗೆ ಕಾರಣವಾಗಲಿದೆ. ಹಿಂದೆ ಬೆಳ್ತಂಗಡಿ ತಾಲೂಕಿನ ಕುದುರೇ ಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಬಿದ್ದ ಬೆಂಕಿ ವ್ಯಾಪಕವಾಗಿ ಅರಣ್ಯ ನಾಶಕ್ಕೆ ಹಾಗೂ ಅರಣ್ಯ ವನ್ಯಜೀವಿಗಳ ನಾಶಕ್ಕೆ ಕಾರಣವಾಗಿತ್ತು.
ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್ ಎಫ್ ಒ ಶರ್ಮಿಷ್ಠಾ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು,ಬೆಂಕಿಯು ಹುಲ್ಲುಗಾವಲು ಪ್ರದೇಶದಲ್ಲಿ ಹರಡಿದ್ದು ಹೆಚ್ಚಿನ ಹಾನಿಯಾಗುವ ಸಂಭವವಿಲ್ಲ ಎಂದು ತಿಳಿಸಿದ್ದಾರೆ.

ಇಲ್ಲಿ ಬೆಂಕಿ ಉಂಟಾಗುತ್ತಿದ್ದಂತೆ ಸಮೀಪದ ಗ್ರಾಮಗಳಲ್ಲಿ ವಾತಾವರಣ ಬದಲಾಗಿದ್ದು ಹಗಲಲ್ಲಿ ಉರಿಬಿಸಿಲು ರಾತ್ರಿಯಾಗುತ್ತಿದ್ದಂತೆ ಕೊಂಚ ತಂಪಿನ ವಾತಾವರಣ ಏರ್ಪಟ್ಟಿದೆ.
