ಬೆಳ್ತಂಗಡಿ: ಕುವೆಟ್ಟು ಗ್ರಾಮದ ಗುರುವಾಯನಕೆರೆ ಅಯ್ಯಪ್ಪ ಗುಡಿ ಸಮೀಪದ ರಾಮನಗರ ಎಂಬಲ್ಲಿ ಹಾಡುಹಗಲೇ ಮನೆಯೊಂದರ ಬೀಗದ ಚಿಲಕವನ್ನು ಮುರಿದು ಒಳಗನುಗ್ಗಿದ್ದ ಕಳ್ಳರು ನಗದು, ಚಿನ್ನದ ಸರ ಸೇರಿದಂತೆ ಸುಮಾರು 70 ಸಾವಿರ ಮೌಲ್ಯದ ಸೊತ್ತುಗಳನ್ನು ಕಳವುಗೈದ ಘಟನೆ ಜ.31ರಂದು ಮಧ್ಯಾಹ್ನ ಸಂಭವಿಸಿದೆ.
ರಾಮನಗರ ಶ್ರೀ ದುರ್ಗಾ ನಿವಾಸಿ ರಾಘವೇಂದ್ರ ಆಚಾರ್ಯ ಇವರ ಮನೆಯಿಂದ ಈ ಕಳ್ಳತನ ನಡೆದಿದೆ. ರಾಘವೇಂದ್ರ ಆಚಾರ್ಯ ಅವರು ಬೆಳ್ತಂಗಡಿಯಲ್ಲಿ ಚಿನ್ನಾಭರಣ ತಯಾರಿ ಕೆಲಸವನ್ನು ಮಾಡುತ್ತಿದ್ದು ಬೆಳಿಗ್ಗೆ ಅಲ್ಲಿಗೆ ಹೋಗಿದ್ದರು. ಪತ್ನಿ ಖಾಸಗಿಯಾಗಿ ಕೆಲಸಕ್ಕೆ ಹೋಗಿದ್ದು, ಮಕ್ಕಳು ಶಾಲೆಗೆ ಹೋಗಿರುವುದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ಸಂದರ್ಭವನ್ನು ನೋಡಿಕೊಂಡ ಕಳ್ಳರು ಮನೆಯ ಎದುರು ಬಾಗಿಲಿನ ಚಿಲಕವನ್ನು ಮುರಿದು ಒಳ ನುಗ್ಗಿ ಮೂರು ಗೋದ್ರೇಜ್ನ ಓಪನ್ ಮಾಡಿ ಬಟ್ಟೆ-ಬರೆಗಳನ್ನು ಹೊರಗೆ ಎಳೆದು ಹಾಕಿ ಚೆಲ್ಲಾಪಿಲ್ಲಿಗೊಳಿಸಿ, ಚಿನ್ನಾಭರಣ ಹಾಗೂ ನಗದಿಗಾಗಿ ಹುಡುಕಾಡಿರುವುದು ಕಂಡು ಬಂದಿದೆ. ಗೋದ್ರೇಜ್ನಲ್ಲಿದ್ದ ರೂ.15 ಸಾವಿರ ನಗದು ಹಾಗೂ ಸುಮಾರು 50 ಸಾವಿರ ಮೌಲ್ಯದ ಒಂದು ಪವನಿನ ಚಿನ್ನದ ಸರ ಹಾಗೂ ಬೆಳ್ಳಿಯ ಆಭರಣಗಳನ್ನು ಕೊಂಡು ಹೋಗಿದ್ದಾರೆ ಎಂದು ಮನೆಯ ಮಾಲಕ ರಾಘವೇಂದ್ರ ಆಚಾರ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ನಗ-ನಗದು ಸೇರಿ ಸುಮಾರು 70 ಸಾವಿರ ಮೌಲ್ಯದ ಸೊತ್ತುಗಳು ಸೇರಿದೆ ಎಂದು ಅಂದಾಜಿಸಲಾಗಿದೆ.
ಮಧ್ಯಾಹ್ನ ಸುಮಾರು 11.3೦ರಿಂದ 12.30ರ ನಡುವೆ ಈ ಕಳ್ಳತನ ನಡೆದಿದೆ. ಮನೆಯ ಚಿಲಕವನ್ನು ಮುರಿದು ಒಳನುಗ್ಗಿ ಕಳ್ಳತನ ನಡೆಸಿ ಮರಳಿ ಹೋಗುವಾಗ ಎದುರಿನ ಬಾಗಿಲನ್ನು ಲಾಕ್ ಹಾಕಿಕೊಂಡು ಹೋಗಿದ್ದರು. ಮಧ್ಯಾಹ್ನ ರಾಘವೇಂದ್ರ ಆಚಾರ್ಯ ಅವರು ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ರಾಘವೇಂದ್ರ ಆಚಾರ್ಯರು ಠಾಣೆಗೆ ಬಂದು ಮಾಹಿತಿ ನೀಡಿದ ನಂತರ ಸಂಜೆ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.