ಬೆಳ್ತಂಗಡಿ; ಇಂದು ಖಾಸಗಿ ಸಂಸ್ಥೆಗಳಲ್ಲಿ, ವಾಣಿಜ್ಯ ಸಂಸ್ಥೆಗಳಲ್ಲಿ ದುಡಿಯುವ ನೌಕರರ ದುಡಿಮೆಯ ಅವಧಿಯನ್ನು 8 ಗಂಟೆಯಿಂದ 10 ಗಂಟೆಗೆ ಏರಿಸಲು ನಿರ್ಧರಿಸಿದ ರಾಜ್ಯ ಸರಕಾರದ ಪ್ರಸ್ತಾಪವನ್ನು ಸಿಐಟಿಯು ಒಪ್ಪಲು ಸಾದ್ಯವಿಲ್ಲ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಬಿ.ಎಂ.ಭಟ್ ಹೇಳಿದ್ದಾರೆ.
ನೌಕರರ ಕೆಲಸದ ಅವದಿಯನ್ನು ಹೆಚ್ಚಿಸಲು ಮುಂದಾಗುತ್ತಿರುವ ರಾಜ್ಯ ಸರಕಾರದ ನಡೆ ಕಾರ್ಮಿಕ ವರ್ಗಕ್ಕೆ ಮಾಡುವ ಮಹಾದ್ರೋಹವಾಗಲಿದೆ ಎಂದ ಅವರು, 1885 ರಲ್ಲಿ ಚಿಕಾಗೋದಲ್ಲಿ ಪ್ರಾರಂಭವಾಗಿ ಜಗತ್ತಿನಾಧ್ಯಂತ ನಡೆದ ತ್ಯಾಗ ಬಲಿದಾನದ ಹೋರಾಟದ ಪರಿಣಾಮ ಜಾರಿಯಾದ 8 ಗಂಟೆಯ ದುಡಿಮೆಯನ್ನು 10 ಗಂಟೆಗೆ ಏರಿಸುವುದೆಂದರೆ ಇತಿಹಾಸವನ್ನು ಹಿಂದಕ್ಕೆ ತೆಗೆದುಕೊಂಡು ಹೋದಂತೆ ಎಂದು ಅವರು ಟೀಕಿಸಿದರು. ತಾನೊಬ್ಬ ಸಮಾಜವಾದಿ ಎಂದು ಹೇಳಿಕೊಳ್ಳುತ್ತಿರುವ ಮಾನ್ಯ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಕಾರ್ಮಿಕರ ವಿರೋದೀ ದೋರಣೆ ಕೈಗೊಳ್ಳಲು ಮುಂದಾಗಿರುವುದು ಖಂಡನೀಯ. ಈಗಾಗಲೇ ಬೆಲೆ ಏರಿಕೆಯಿಂದ ಬದುಕಲಾಗುತ್ತಿಲ್ಲ ಎಂದು ತಮ್ಮ ಸಂಬಳ ಏರಿಸಿಕೊಂಡ ಶಾಸಕ ಸಂಸದರು ಬೀಡಿ ಕಾರ್ಮಿಕರ ಸಂಬಳವನ್ನು ರೂ 331 ರಿಂದ ರೂ 270 ಕ್ಕೆ ಇಳಿಸಿ ತಾನು ಕಾರ್ಮಿಕ ವಿರೋದಿ ಎಂದು ಸಾಬೀತು ಪಡಿಸಿದೆ ಎಂದು ಟೀಕಿಸಿದರು. ಈ ಹಿಮ್ಮುಖ ವೇತನ ಆದೇಶವನ್ನು ಮಾಲಕರ ಪರವಾಗಿ ಪಕ್ಷ ಬೇದ ಬಿಟ್ಟು ಎಲ್ಲರೂ ಒಪ್ಪಿಕೊಂಡಿದ್ದಾರೆ. ಅದೇ ರೀತಿ ಕೆಲಸದ ಅವದಿ ಹೆಚ್ಚಳಕ್ಕೆ ಎಲ್ಲಾ ಶಾಸಕರು ಒಪ್ಪಿಗೆ ನೀಡಿದರೆ ಕಾರ್ಮಿಕ ವರ್ಗ ಸಮರ ಶೀಲ ಹೋರಾಟಕ್ಕೆ ಮುಂದಾಗಲಿದೆ ಎಂದವರು ಹೇಳಿದರು. ಈಗಾಗಲೇ ಕಾರ್ಮಿಕರ ಪರವಾಗಿರುವ ಕಾನೂನುಗಳನ್ನು ರದ್ದು ಪಡಿಸಿ ಮಾಲಕರ ಪರವಾಗಿ ನೂತನ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಹೊರಟಿರುವ ಕೇಂದ್ರದ ಶ್ರೀ ನರೇಂದ್ರ ಮೋದಿ ಸರಕಾರದ ವಿರುದ್ದ ಜುಲೈ 9 ರಂದು ಅಖಿಲ ಭಾರತ ಮುಷ್ಕರ ನಡೆಸಲು ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ ಎಂದರು. ಬಿಜೆಪಿ ಸರಕಾರದಂತೆ ರಾಜ್ಯದ ಕಾಂಗ್ರೇಸ್ ನೇತೃತ್ವದ ಕರ್ನಾಟಕ ಸರಕಾರವೂ ಕಾರ್ಮಿಕ ವಿರೋದಿಯಾಗಿ ಮುಂದುವರಿದರೆ ಅದರ ವಿರುದ್ದವು ಈ ಜಂಟಿ ಹೋರಾಟ ನಡೆಸಲು ಸಿಐಟಿಯು ಮುಂದಾಗಲಿದೆ ಎಂದರು.
