ಬೆಳ್ತಂಗಡಿ; ದೇಶದಲ್ಲಿ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ವ್ಯವಸ್ಥಿತ ಪಿತೂರಿ ಆರಂಭವಾಗಿದ್ದು , ಅಪಾಯಕಾರಿ ಬೆಳವಣಿಗೆ. ಇಂತಹ ಸಂದರ್ಭದಲ್ಲಿ ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಲು ಹಾಗೂ ಪಡೆಯಲು ಸಂಘಟಿತರಾಗಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ , ಪಂಚಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ ರವರು ಕರೆ ನೀಡಿದರು.
ಅವರು ಉಜಿರೆ ಗಾಂಧಿನಗರದಲ್ಲಿ ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸಂವಿಧಾನದ ಮೂಲ ಆಶಯಗಳಲ್ಲಿ ಒಂದಾದ ಮೀಸಲಾತಿಯನ್ನು ರದ್ದು ಪಡಿಸಲು ಸಂವಿಧಾನ ವಿರೋಧಿಗಳು ಪ್ರತಿಭಟನೆಯ ಹಂತಕ್ಕೆ ತಲುಪಿದ್ದಾರೆ. ಇದರ ಬಗ್ಗೆ ದಲಿತ ಸಮುದಾಯ ಸದಾ ಜಾಗೃತಿಯಲ್ಲಿರಬೇಕಾದ ಅಗತ್ಯವಿದೆ. ಉಜಿರೆಯಲ್ಲಿ 400 ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸಿಸುತ್ತಿದ್ದರೂ ಅಂಬೇಡ್ಕರ್ ಭವನ ನಿರ್ಮಾಣವಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ನಮ್ಮ ಸ್ವಾಭಿಮಾನದ ಸಂಕೇತವಾಗಿ ಉಜಿರೆ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಯುವಕರು ಪಣತೊಡಬೇಕು ಎಂದರು. ಸರ್ಕಾರಿ ಜಮೀನನ್ನು ಗುರುತಿಸಿಕೊಂಡು , ಅದರ ಹಂಚಿಕೆಗಾಗಿ ಹೋರಾಟ ತೀವ್ರಗೊಳ್ಳಬೇಕಾದ ಅಗತ್ಯವಿದೆ. ಸರ್ಕಾರ ಜಮೀನು ಹಂಚಿಕೆ ಸಂದರ್ಭದಲ್ಲಿ ದಲಿತ ಸಮುದಾಯವನ್ನು ಕಡೆಗಣಿಸಿದ ಕಾರಣ ಇಂದಿಗೂ ಭೂರಹಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಭೂಮಿಯ ಸ್ವಾತಂತ್ರ್ಯಕ್ಕಾಗಿ ಚಳವಳಿ ನಡೆಸಬೇಕಾದ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಮಾತನಾಡುತ್ತಾ ಜನರಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಅಂಬೇಡ್ಕರ್ ಭವನ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತೇವೆ , ಈ ಹಿನ್ನೆಲೆಯಲ್ಲಿ ನಮ್ಮಲ್ಲಿ ಸಂಘಟನೆಯ ಅಗತ್ಯ ಹಿಂದಿಗಿಂತಲೂ ಅಗತ್ಯವಿದೆ ಎಂದ ಅವರು ಡಿಸಿ ಮನ್ನಾ ಜಮೀನಿನ ಹೋರಾಟ ಒಂದು ಹಂತಕ್ಕೆ ತಲುಪಿದ್ದು , ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು , ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವ ತನಕವೂ ಹೋರಾಟ ನಡೆಯಲಿದ್ದು , ಈ ಹೋರಾಟಕ್ಕೆ ಬೆಂಬಲ ಕೋರಿದರು.
ಸಭೆಯಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ್ , ಉಪಾಧ್ಯಕ್ಷರುಗಳಾಗಿ ಸತೀಶ್ .ರವಿ.ಆರ್.ಜೆ , ಕಾರ್ಯದರ್ಶಿಯಾಗಿ ದಿನೇಶ್ ಗಾಂಧಿನಗರ ರವರು ಆಯ್ಕೆಯಾದರು.
ವೇದಿಕೆಯಲ್ಲಿ ದಸಂಸ(ಅಂಬೇಡ್ಕರ್ ವಾದ) ವೇಣೂರು ಹೋಬಳಿ ಸಂ ಸಂಚಾಲಕ ಚರಣ್ ಕುಕ್ಕೇಡಿ , ಸಂವಿಧಾನ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಇದರ ಕೋಶಾಧಿಕಾರಿ ಶಿವಾನಂದ ಪಡಂಗಡಿ , ಮಾಜಿ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ರವರು ಉಪಸ್ಥಿತರಿದ್ದರು.
ಸಂವಿಧಾನ ಸಂರಕ್ಷಣಾ ಸಮಿತಿಯ ಬೆಳ್ತಂಗಡಿಯ ಜೋತೆ ಕಾರ್ಯದರ್ಶಿ ವಿನಯ್ ಕುಮಾರ್ ಗಾಂಧಿನಗರ ಕಾರ್ಯಕ್ರಮ ನಿರೂಪಿಸಿ , ಸ್ವಾಗತಿಸಿ, ವಂದಿಸಿದರು.
