
ಬೆಳ್ತಂಗಡಿ; ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಿದ್ದು , ಮತ್ತು ವಿದ್ಯಾರ್ಥಿಗಳ ಇತರ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಬೇಷರತ್ತಾಗಿ ಒಪ್ಪಿಕೊಂಡಿರುವುದು ದೇಶದ ಸಂವಿಧಾನ , ಪ್ರಜಾಪ್ರಭುತ್ವಕ್ಕೆ ಸಂದ ಐತಿಹಾಸಿಕ ಜಯವಾಗಿದೆ.
ದೇಶದ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ವಿದ್ಯಾರ್ಥಿ ಚಳವಳಿ ದೇಶದ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ಸಮವಾಗಿದೆ. ಅಂದು ಸ್ವಾತಂತ್ರ್ಯ ಹೋರಾಟಕ್ಕೆ ಹೆದರಿ ಬ್ರಿಟಿಷರು ದೇಶ ಬಿಟ್ಟು ತೆರಳಿ ಸ್ವಾತಂತ್ರ್ಯ ಸಿಕ್ಕಂತೆ ಇಂದು ವಿದ್ಯಾರ್ಥಿಗಳು ನಡೆಸಿದ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ಹೆದರಿ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಿದ್ದಾರೆ. ಇದು ದೇಶದ ಪ್ರಜಾಪ್ರಭುತ್ವಕ್ಕೆ ಸಿಕ್ಕಿದ ಐತಿಹಾಸಿಕ ಗೆಲುವು. ಅದರ ಜೊತೆಗೆ ವಿದ್ಯಾರ್ಥಿಗಳು ಮುಂದಿಟ್ಟಿದ್ದ ನೀಟ್ ಪರೀಕ್ಷಾ ಅಕ್ರಮದಿಂದ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರತಿ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ , ವಿದ್ಯಾರ್ಥಿ ಚಳವಳಿಯಲ್ಲಿ ಭಾಗವಹಿಸಿದವರ ಮೇಲೆ ದಾಖಲಿಸಿದ ಎಲ್ಲಾ ಪ್ರಕರಣಗಳನ್ನು ವಾಪಸ್ ಸೇರಿದಂತೆ ವಿದ್ಯಾರ್ಥಿಗಳು ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಬೇಷರತ್ತಾಗಿ ಒಪ್ಪಿಕೊಂಡಿದ್ದು ಜನಚಳವಳಿಗೆ ಸಂದ ಐತಿಹಾಸಿಕ ಜಯ. ಈ ಐತಿಹಾಸಿಕ ಚಳವಳಿಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಭಾಗವಹಿಸಿದ ಯುವಜನರು , ರೈತ , ಕಾರ್ಮಿಕರಿಗೆ , ಹೋರಾಟದಿಂದ ಬದಲಾವಣೆ ಸಾಧ್ಯ ಎಂದು ಸಾಬೀತು ಪಡಿಸಿದ ಸರ್ವರಿಗೂ ಅಭಿನಂದನೆಗಳು. ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ಜುಲೈ 27 ರಂದು ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಎದುರು ನಡೆಸಲು ಉದ್ದೇಶಿಸಿದ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿರುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.










