
ಬೆಳ್ತಂಗಡಿ : ಮ್ಯಾಟ್ರಿಮೋನಿ ವೆಬ್ಸೈಟ್ ಮೂಲಕ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಕೆ ಮೂಡಿಸಿದ ಯುವತಿಯೊಬ್ಬಳು ವಿವಿಧ ನೆಪಗಳನ್ನು ಹೇಳಿ ಬೆಳ್ತಂಗಡಿಯ ಉದ್ಯಮಿಯೊಬ್ಬರಿಂದ 87 ಲಕ್ಷ ಪಡೆದು ವಂಚಿಸಿರುವ ಆರೋಪ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಸಾರಾಂಶ: ಬೆಳ್ತಂಗಡಿ ತಾಲೂಕಿನ ನಿವಾಸಿಯಾಗಿರುವ ಉದ್ಯಮಿಯೊಬ್ಬರಿಗೆ 2024ರ ಮೇ ತಿಂಗಳಲ್ಲಿ ಮ್ಯಾಟ್ರಿಮೋನಿ ಮೂಲಕ ಶಿವಮೊಗ್ಗ/ಬೆಂಗಳೂರು ಮೂಲದ ಅನಿಷಾ ಪಾಲನ್ನ (35) ಎಂಬ ಯುವತಿಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ಇನ್ಸ್ಟಾಗ್ರಾಂ ಹಾಗೂ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದು, ಮದುವೆಯಾಗುವ ಕುರಿತು ಮೊಬೈಲ್ ನಲ್ಲಿ ಮಾತುಕತೆ ನಡೆಸುತ್ತಿದ್ದರು.ಈ ವೇಳೆ ಆರೋಪಿತೆ ವ್ಯವಹಾರದಲ್ಲಿ ಆರ್ಥಿಕ ತೊಂದರೆ ಉಂಟಾಗಿದೆ ಎಂದು ಹೇಳಿ ವಿವಿಧ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ ಹಾಗೂ ತನ್ನ ಖಾತೆ ಮತ್ತು ಗೂಗಲ್ ಪೇ ಮೂಲಕ ಹಂತ ಹಂತವಾಗಿ ಹಣ ವರ್ಗಾಯಿಸಿಕೊಳ್ಳುತ್ತಿದ್ದಳು. ಜೊತೆಗೆ ಬೆಂಗಳೂರಿನಲ್ಲಿ ತನ್ನ ಪರವಾಗಿ ಬಂದ ವ್ಯಕ್ತಿಯ ಮೂಲಕ ಲಕ್ಷಾಂತರ ರೂಪಾಯಿ ಹಣವನ್ನೂ ಅನನ್ಯ ಕೃಷ್ಣ ಅವರಿಂದ ಪಡೆದುಕೊಂಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಒಟ್ಟಾರೆ ವಿವಿಧ ಹಂತಗಳಲ್ಲಿ 87,22,710 ರೂಪಾಯಿ ಪಡೆದುಕೊಂಡ ಬಳಿಕ ಆರೋಪಿತೆ ಅನಿಷಾ ಪಾಲನ್ನ ಮೊಬೈಲ್ ಸಂಪರ್ಕಕ್ಕೂ ಸಿಗದೆ, ಹಣವನ್ನು ಹಿಂದಿರುಗಿಸದೇ ವಂಚಿಸಿರುವುದಾಗಿ ದೂರುದಾರರು ತಿಳಿಸಿದ್ದಾರೆ.ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 318(4) ಅಡಿಯಲ್ಲಿ ಜು.18 ರಂದು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.










