ಬೆಳ್ತಂಗಡಿ; ಕೇಂದ್ರ ಸರಕಾರದ ದ್ವಿಮುಖ ನೀತಿ ಪದೇ ಪದೇ ಬಯಲಾಗುತ್ತಿದೆ. ಬಡವರ ಪರ, ಬ್ರಷ್ಟಾಚಾರ ವಿರೋಧಿ ಎನ್ನುತ್ತಿದ್ದ ಕೇಂದ್ರ ಸರಕಾರ ಇದೀಗ ಬಡ ಮಹಿಳೆಯರಿಗಾಗಿ ರೂಪಿಸಿದ್ದ ಉಜ್ವಲ ಯೋಜನೆಯನ್ನು ಶೂಲವಾಗಿ ಪರಿವರ್ತಿಸಿದೆ. ಬಡ ಹೆಣ್ಣುಮಕ್ಕಳಿಗಾಗಿ ಉಜ್ವಲ ಯೋಜನೆಯಡಿ ವರ್ಷಕ್ಕೆ 12 ಸಿಲಿಂಡರ್ ಸಬ್ಸಿಡಿ ಮೂಲಕ ನೀಡಲಾಗುತ್ತಿತ್ತು. ಆದರೆ ನಂತರ ಅದನ್ನು 9ಕ್ಕೆ ಸೀಮಿತ ಮಾಡಲಾಯಿತು. ಇದೀಗ ಕೇವಲ 4ಕ್ಕೆ ಸೀಮಿತ ಮಾಡಿರುವುದು ಬಡ ಕುಟುಂಬಗಳ ಬದುಕಿಗೆ ನುಂಗಲಾರದ ತುತ್ತಾಗಿದೆ ಎಂದು ಜಿಲ್ಲಾ ಕೆ.ಡಿ.ಪಿ ಸದಸ್ಯ ಕಾಂಗ್ರೆಸ್ ಮುಖಂಡ ಸಂತೋಷ್ ಕುಮಾರ್ ಲಾಯಿಲ ಹೇಳಿದ್ದಾರೆ.
ಉಳ್ಳ ಉದ್ಯಮಿಗಳಿಗೆ ಸಾವಿರ ಸಾವಿರ ಕೋಟಿ ಯೋಜನೆಗಳನ್ನು ನೀಡಿ, ಬಡವರ ಮೇಲೆ ಹೊರೆಗಳ ಮೇಲೆ ಹೊರೆಯನ್ನು ಹೊರಿಸುತ್ತಿದೆ. ಬಡ ಕಾರ್ಮಿಕ ವರ್ಗದ ಮಹಿಳೆಯರು ಏನು ಮಾಡಬೇಕು? ಈ ಕುಟುಂಬಗಳ ಪರಿಸ್ಥಿತಿ ಏನು ಎನ್ನುವುದು ಪ್ರಶ್ನೆ. ಅನಿಲ ಉತ್ಪಾದನಾ ಕಂಪನಿಗಳೂ ಬೇಕಾದಂತೆ ದರ ಏರಿಸುತ್ತಿವೆ. ಆದರೂ ಅವರ ಮೇಲೆ ಕ್ರಮ ಕೈಗೊಳ್ಳದೆ, ಬಡ ಮಹಿಳೆಯರ ಮೇಲೆ ಯಾಕೆ ಇಷ್ಟೊಂದು ಹೊರೆ ಹೊರಿಸುತ್ತಿದ್ದಾರೆ? ಈಗಾಗಲೇ ದಿನಬಳಕೆ ವಸ್ತುಗಳ ಮೇಲಿನ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಕಂಗೆಟ್ಟಿದ್ದಾರೆ, ಇದೀಗ ಸಿಲಿಂಡರ್ಗಳ ಮೇಲಿನ ದರ ಏರಿಕೆ ಹಾಗೂ ಸಿಲಿಂಡರ್ ಇಳಿಕೆ ಮಾಡಿರುವುದು ಮನೆಗಳಿಗೆ ಕನಿಷ್ಠ ಆಹಾರವನ್ನೂ ಬೇಯಿಸಿ ತಿನ್ನಲಾರದ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಕೇಂದ್ರ ಸರಕಾರ ಕೂಡಲೇ ಸಬ್ಸಿಡಿ ಸಿಗುವ ಸಿಲಿಂಡರ್ಗಳ ಸಂಖ್ಯೆಯನ್ನು ಹಿಂದಿನ ಮಟ್ಟಕ್ಕೆ ಹೆಚ್ಚಿಸಬೇಕು ಹಾಗೂ ಅಡುಗೆ ಅನಿಲದ ಬೆಲೆ ನಿಯಂತ್ರಣಕ್ಕೆ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಜಿಲ್ಲಾ ಕೆಡಿಪಿ ಸದಸ್ಯ
ಸಂತೋಷ್ ಕುಮಾರ್ ಲಾಯಿಲಾ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
