Home ರಾಷ್ಟ್ರ/ರಾಜ್ಯ ಚಾರ್ಮಾಡಿ ಘಾಟಿಯಲ್ಲಿ ಚಿರತೆ ಆತಂಕ: ಮಳೆಗಾಲದಲ್ಲಿ ಪ್ರವಾಸಿಗರಿಗೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ

ಚಾರ್ಮಾಡಿ ಘಾಟಿಯಲ್ಲಿ ಚಿರತೆ ಆತಂಕ: ಮಳೆಗಾಲದಲ್ಲಿ ಪ್ರವಾಸಿಗರಿಗೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ

0


ಬೆಳ್ತಂಗಡಿ: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಮಳೆಗಾಲದ ಹಿನ್ನೆಲೆ ಮತ್ತು ಕಡಿಮೆಯಾದ ದೃಶ್ಯತೆಯಿಂದ ಪ್ರವಾಸಿಗರಿಗೆ ಹೆಚ್ಚಿನ ಅಪಾಯ ಸಾಧ್ಯತೆ ಇರುವ ಕುರಿತು ಆತಂಕ ವ್ಯಕ್ತವಾಗಿದೆ. ಪ್ರಯಾಣಿಕರು ಎಚ್ವರಿಕೆ ವಹಿಸುವಂತೆ ಅರಣ್ಯ ಇಲಾಖೆ‌ ಎಚ್ಚರಿಸಿದೆ.
ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಗೆ ಒಳಪಡುವ ಘಾಟಿ ರಸ್ತೆಯ ತಡೆಗೋಡೆಯ ಸಮೀಪ ಚಿರತೆ ಕಾಣಿಸಿಕೊಂಡಿದೆ. ರಸ್ತೆಯ ಬದಿಯಲ್ಲಿಯೇ ಕೆಲಹೊತ್ತು ಇದ್ದ ಚಿರತೆ ಅರಣ್ಯದತ್ತ ಹೋಗಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಮಳೆಗಾಲ ಆರಂಭವಾಗಿರುವುದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ.
ಮಳೆ ಹಾಗೂ ದಟ್ಟ ಮಂಜಿನಿಂದ ದೃಶ್ಯತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಬದಿ ಅಥವಾ ಅರಣ್ಯ ಪ್ರದೇಶದ ಸಮೀಪ ಕಾಡುಪ್ರಾಣಿಗಳ ಚಲನೆ ತಕ್ಷಣ ಗಮನಕ್ಕೆ ಬಾರದಿರುವ ಸಾಧ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ ಫೋಟೋ ಅಥವಾ ಸೆಲ್ಫಿ ಪಡೆಯಲು ವಾಹನದಿಂದ ಇಳಿಯುವ ಪ್ರವಾಸಿಗರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.
ಚಾರ್ಮಾಡಿ ಘಾಟಿ ಸಂಪೂರ್ಣ ಅರಣ್ಯ ವಲಯವಾಗಿರುವುದರಿಂದ ಕಾಡುಪ್ರಾಣಿಗಳ ಸಂಚಾರ ಸಹಜ. ಆದರೆ ಮಾನವ ಚಟುವಟಿಕೆ ಹೆಚ್ಚಿರುವ ರಸ್ತೆಯ ಸಮೀಪ ಅವು ಕಾಣಿಸಿಕೊಂಡಿರುವುದು ಗಮನಾರ್ಹವಾಗಿದೆ. ಹೀಗಾಗಿ ವಾಹನ ನಿಲ್ಲಿಸುವಾಗ ಸುರಕ್ಷ ಸ್ಥಳ ಆಯ್ಕೆ ಮಾಡುವುದು, ಗುಂಪಾಗಿ ರಸ್ತೆ ಅಂಚಿಗೆ ತೆರಳುವುದು ಹಾಗೂ ಕಾಡುಪ್ರಾಣಿಗಳ ಹತ್ತಿರ ಹೋಗಲು ಯತ್ನಿಸುವುದನ್ನು ತಪ್ಪಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version