ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ದೇಶದ 10 ಕೋಟಿ ಬಡ ಮಹಿಳೆಯರಿಗೆ ಅಡುಗೆ ಅನಿಲದ ಸಬ್ಸಿಡಿ ನೀಡುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ವಾಸ್ತವದಲ್ಲಿ ಅದೇ ಮಹಿಳೆಯರ ಮೇಲೆಯೇ ಹೊಸ ಆರ್ಥಿಕ ಹೊರೆ ಹೇರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರಿಕಾಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ವರ್ಷಕ್ಕೆ 12 ಸಿಲಿಂಡರ್ಗಳವರೆಗೆ ಸಬ್ಸಿಡಿ ಸೌಲಭ್ಯ ದೊರೆಯುತ್ತಿತ್ತು. ನಂತರ ಅದನ್ನು 9ಕ್ಕೆ ಇಳಿಸಲಾಯಿತು. ಇದೀಗ ಸಬ್ಸಿಡಿ ಸಿಗುವ ಸಿಲಿಂಡರ್ಗಳ ಸಂಖ್ಯೆಯನ್ನು ಕೇವಲ 4ಕ್ಕೆ ಸೀಮಿತಗೊಳಿಸಿರುವುದು ಬಡ ಕುಟುಂಬಗಳ ಬದುಕಿಗೆ ನೇರ ಹೊಡೆತವಾಗಿದೆ.
ಕೇಂದ್ರ ಸರ್ಕಾರ ನೀಡುತ್ತಿರುವ ₹300 ಸಬ್ಸಿಡಿಯ ಲೆಕ್ಕಾಚಾರದಲ್ಲಿ ನೋಡಿದರೆ, 8 ಸಿಲಿಂಡರ್ಗಳ ಮೇಲಿನ ಸಬ್ಸಿಡಿಯನ್ನು ಕಳೆದುಕೊಳ್ಳುವ ಪ್ರತಿಯೊಂದು ಕುಟುಂಬಕ್ಕೂ ವರ್ಷಕ್ಕೆ ₹2,400 ಹೆಚ್ಚುವರಿ ಹೊರೆ ಬೀಳಲಿದೆ. ಈ ನಿರ್ಧಾರವು ಕೇವಲ ಒಂದೊಂದು ಕುಟುಂಬದ ಸಮಸ್ಯೆಯಲ್ಲ. ಉಜ್ವಲಾ ಯೋಜನೆಯ 10ಕ್ಕೂ ಹೆಚ್ಚು ಕೋಟಿ ಫಲಾನುಭವಿಗಳ ಲೆಕ್ಕದಲ್ಲಿ ನೋಡಿದರೆ, ದೇಶದ ಬಡ ಮಹಿಳೆಯರ ಮೇಲೆ ವರ್ಷಕ್ಕೆ ಸುಮಾರು ₹24,792 ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ಇದರಿಂದಾಗಿ ಬಡ ಕುಟುಂಬಗಳಿಗೆ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ದೈನಂದಿನ ಜೀವನ ನಿರ್ವಹಣೆಯ ಮೇಲೆ ನೇರ ಪರಿಣಾಮ ಭಾರಿ ಪರಿಣಾಮ ಬೀರಲಿದೆ.
ಕಳೆದ ಮೂರು ತಿಂಗಳಲ್ಲಿ ಎರಡು ಹಂತಗಳಲ್ಲಿ ಗೃಹಬಳಕೆಯ LPG ಸಿಲಿಂಡರ್ ಬೆಲೆ ಒಟ್ಟು ₹89 ಏರಿಕೆಯಾಗಿದೆ. ದೆಹಲಿಯಲ್ಲಿ 14.2 ಕೆ.ಜಿ. ಸಿಲಿಂಡರ್ ಬೆಲೆ ₹942ಕ್ಕೆ ತಲುಪಿದೆ. ಅಂದರೆ ಒಂದು ಕಡೆ ಸಬ್ಸಿಡಿ ಕಡಿತ, ಮತ್ತೊಂದು ಕಡೆ ಬೆಲೆ ಏರಿಕೆ ಎಂಬ ದ್ವಿಮುಖ ಹೊಡೆತವನ್ನು ಸಾಮಾನ್ಯ ಜನರು ಎದುರಿಸುತ್ತಿದ್ದಾರೆ.
ಪೆಟ್ರೋಲ್, ಡೀಸೆಲ್, ಸಿಎನ್ಜಿ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ದೇಶದ ಜನರ ಖರೀದಿ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆ. ಆದರೆ ತೈಲ ಕಂಪನಿಗಳು ನಿರಂತರ ಲಾಭ ಗಳಿಸುತ್ತಿರುವುದು ಗಮನಾರ್ಹ.ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿ ಕಂಪನಿಗಳ ಲಾಭವನ್ನು ಹೆಚ್ಚಿಸುವ ನೀತಿಗಳು ಜನಪರ ಆಡಳಿತದ ಲಕ್ಷಣಗಳಲ್ಲ.
ಉಜ್ವಲಾ ಯೋಜನೆ ಬಡ ಮಹಿಳೆಯರ ಬದುಕು ಸುಧಾರಿಸುವ ಸಾಮಾಜಿಕ ಕಾರ್ಯಕ್ರಮವಾಗಬೇಕೇ ಹೊರತು, ಕೇವಲ ರಾಜಕೀಯ ಪ್ರಚಾರದ ಸಾಧನವಾಗಬಾರದು. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಸಬ್ಸಿಡಿ ಸಿಗುವ ಸಿಲಿಂಡರ್ಗಳ ಸಂಖ್ಯೆಯನ್ನು ಹಿಂದಿನ ಮಟ್ಟಕ್ಕೆ ಹೆಚ್ಚಿಸಬೇಕು ಹಾಗೂ ಅಡುಗೆ ಅನಿಲದ ಬೆಲೆ ನಿಯಂತ್ರಣಕ್ಕೆ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳಬೇಕು.
ಇಲ್ಲವಾದರೆ “ಉಜ್ವಲಾ” ಎಂಬ ಹೆಸರಿನಲ್ಲಿ ಆರಂಭವಾದ ಯೋಜನೆಯೇ ಕೋಟ್ಯಂತರ ಬಡ ಮಹಿಳೆಯರ ಬದುಕಿನಲ್ಲಿ ಮತ್ತಷ್ಟು ಕತ್ತಲೆ ಮೂಡಿಸುವ ಅಪಾಯವಿದೆ ಎಂದು ಅವರು ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.
