ಮಂಗಳೂರು : ಅನಾರೋಗ್ಯ ಪೀಡಿತ ಬಡವರ ಚಿಕಿತ್ಸೆಗೆ ನೆರವು, ಸೂರಿಲ್ಲದ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಸರ್ಕಾರಿ ಶಾಲೆಗಳ ಶೌಚಾಲಯ ಸ್ವಚ್ಛತಾ ಅಭಿಯಾನ..ಹೀಗೆ ಹತ್ತು ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬೆಳ್ತಂಗಡಿಯ ಸಮಾಜ ಸೇವಕ ದೀಪಕ್.ಜಿ.ಅವರು ಮಂಗಳೂರು ಪ್ರೆಸ್ ಕ್ಲಬ್ನ 2025-26ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ನೇತೃತ್ವದ ಸಮಿತಿ ಆಯ್ಕೆ ನಡೆಸಿದ್ದು, ಪ್ರಶಸ್ತಿಯು 10,001 ರೂ.ನಗದು, ಪ್ರಶಸ್ತಿ ಫಲಕ , ಸ್ಮರಣಿಕೆ ಒಳಗೊಂಡಿದೆ. ಮೇ 24ರಂದು ಮಂಗಳೂರಿನ ರೆಡ್ ಕ್ರಾಸ್ ಶತಮಾನೋತ್ಸವ ಭವನದಲ್ಲಿ ನಡೆಯಲಿರುವ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ದೀಪಕ್.ಜಿ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಾಸಗಿ ಬಸ್ ನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ಬಡ ಕುಟುಂಬದ ಹಿನ್ನೆಲೆಯ ದೀಪಕ್.ಜಿ. ಆಶಕ್ತರ ಸೇವೆಯನ್ನೇ ಉಸಿರಾಗಿಸಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಡವರ ಸೇವೆಗಾಗಿ ಪರಿಸರದ ಸಮಾನ ಮನಸ್ಕ ಯುವಕರನ್ನು ಒಗ್ಗೂಡಿಸಿ ರಾಜಕೇಸರಿ ಹೆಸರಿನ ಟ್ರಸ್ಟ್ ಸ್ಥಾಪಿಸಿದ್ದಾರೆ. ದಾನಿಗಳ ನೆರವು ಪಡೆದು ಟ್ರಸ್ಟ್ ಮೂಲಕ 34ಬಡ ಕುಟುಂಬಗಳಿಗೆ ಉಚಿತವಾಗಿ ಮನೆ ನಿರ್ಮಾಣ, ಸ್ವ ಉದ್ಯೋಗಕ್ಕಾಗಿ 21ಹೊಲಿಗೆ ಯಂತ್ರ ವಿತರಣೆ, 38ಮಂದಿ ವಿಕಲಚೇತನರಿಗೆ ವೀಲ್ಚೇರ್ ವಿತರಣೆ, ಗ್ರಾಮಾಂತರ ಪ್ರದೇಶಗಳಲ್ಲಿ ಆನೇಕ ಉಚಿತ ಆರೋಗ್ಯ ತಪಾಸಣಾ ಶಿಬಿರ, ಅನಾರೋಗ್ಯ ಪೀಡಿತ ಬಡ ಮಕ್ಕಳ ಚಿಕಿತ್ಸೆಗೆ ನೆರವು, 12 ಜೋಡಿಗೆ ಸಾಮೂಹಿಕ ವಿವಾಹ, ಸರ್ಕಾರಿ ಶಾಲೆಗಳ ಉಳಿವಿಗೆ ಹೋರಾಟ, ಕ್ರೀಡೆ, ಕಲೆ, ಸಂಸ್ಕೃತಿ ಬಗ್ಗೆ ಜಾಗೃತಿ ಸಹಿತ 600ಕ್ಕೂ ಅಧಿಕ ಸೇವಾ ಯೋಜನೆಗಳನ್ನು ಕಾರ್ಯಗತಗೊಳಿಸಿದ ಸಜ್ಜನ ಸಮಾಜ ಸೇವಕ ಇವರಾಗಿದ್ದಾರೆ.
