Home ಸ್ಥಳೀಯ ಸಮಾಚಾರ ಚಾರಣಪ್ರಿಯರಿಗೆ ನ.20 ರಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ

ಚಾರಣಪ್ರಿಯರಿಗೆ ನ.20 ರಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ

0

ಬೆಳ್ತಂಗಡಿ; ಚಾರಣಪ್ರಿಯರಿಗೆ ನ. 20 ರಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಕಳೆದ ಹಲವು ತಿಂಗಳಿನಿಂದ ಕಾಡ್ಗಿಚ್ಚು ಭಯ,ಮಳೆಗಾಲ ಇತ್ಯಾದಿ ಕಾರಣಗಳಿಂದ ಸಾರ್ವಜನಿಕರಿಗೆ ಜಲಪಾತ ವೀಕ್ಷಣೆಗೆ ಪ್ರವೇಶ ನಿಷೇಧ ಹೇರಲಾಗಿತ್ತು. ಪ್ರಸ್ತುತ ಮಳೆ ಕಡಿಮೆಯಾಗಿದ್ದು ಇದೀಗ ಮತ್ತೆ ಅವಕಾಶ ಕಲ್ಪಿಸಲಾಗಿದೆ.
ನೂರಾರು ಅಡಿ ಎತ್ತರದಿಂದ ನೀರು ಧುಮ್ಮಿಕ್ಕುವ ಬಂಡಾಜೆ ಜಲಪಾತ ಪ್ರದೇಶಕ್ಕೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದಿಂದ ಚಾರಣದ ಮೂಲಕ ತಲುಪಬಹುದು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಈ ಜಲಪಾತಕ್ಕೆ ಹೋಗಬೇಕಾದರೆ 11 ಕಿ.ಮೀ.ದೂರವನ್ನು ಚಾರಣದ ಮೂಲಕವೇ ಕ್ರಮಿಸಿ ತಲುಪಬೇಕು.
ಕಡಿರುದ್ಯಾವರದಿಂದ ಕಡಿದಾದ ಹಾದಿ, ಜಾರುವ ಬಂಡೆಗಳು, ಏರಿಳಿತದ ಹಾದಿ, ಅರಣ್ಯ ಪ್ರದೇಶ,ಸುತ್ತಲೂ ಬೆಳೆದಿರುವ ಮುಳಿಹುಲ್ಲು, ಪೊದೆಗಳು ಅಲ್ಲಲ್ಲಿ ಹರಿಯುವ ನೀರು, ಇಂಬಳಗಳ ಕಾಟದೊಂದಿಗೆ ಚಾರಣ ನಡೆಸಿ ಆಕರ್ಷಕವಾದ ಬಂಡಾಜೆ ಜಲಪಾತವನ್ನು ತಲುಪಬಹುದು.
ರಮಣೀಯವಾದ ಈ ಜಲಪಾತ ವೀಕ್ಷಣೆಗೆ ತೆರಳುವ ವೇಳೆ ಕಾಡಾನೆ ಸಹಿತ ಇತರ ವನ್ಯಜೀವಿಗಳು ಎದುರಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಅತಿ ಅಗತ್ಯವಾಗಿದೆ.
ಜಲಪಾತಕ್ಕೆ ತೆರಳುವ ದಾರಿಯ ಮಾಹಿತಿ ಇರುವ ಸ್ಥಳೀಯರು ಜತೆಗಿದ್ದರೆ ತಲುಪುವುದು ಸುಲಭ.ಚಾರಣದ ವೇಳೆ ಒಂದಿಷ್ಟು ದಾರಿ ತಪ್ಪಿದರೂ ಯಾವುದೇ ಮೊಬೈಲ್ ನೆಟ್ವರ್ಕ್ ಇಲ್ಲದ ಈ ಪರಿಸರದಲ್ಲಿ ಅಲೆಯ ಬೇಕಾಗಬಹುದುಈ ಹಿಂದೆ ಇಂತಹ ಹಲವಾರು ಪ್ರಕರಣಗಳು ನಡೆದಿವೆ.
ಚಾರ್ಮಾಡಿ ಗ್ರಾಮ ವ್ಯಾಪ್ತಿಯಲ್ಲಿರುವ ಈ ಜಲಪಾತಕ್ಕೆ ಕೊಟ್ಟಿಗೆಹಾರದ ಮೂಲಕವೂ ಹೋಗಬಹುದು. ಈ ಭಾಗದಿಂದ ಯಾವುದೇ ಪ್ರವೇಶ ನಿಷೇಧ ಇರಲಿಲ್ಲವಾದ ಕಾರಣ ಇಲ್ಲಿಗೆ ಸಾಕಷ್ಟು ಮಂದಿ ಬರುತ್ತಿದ್ದಾರೆ. ಆದರೆ ಕಡಿರುದ್ಯಾವರದ ಮೂಲಕ ಚಾರಣ ನಡೆಸಿ ಜಲಪಾತ ವೀಕ್ಷಿಸುವ ಆನಂದ ಇಲ್ಲಿ ಸಿಗುವುದು ಕಡಿಮೆ.

-ಮುನ್ನೆಚ್ಚರಿಕೆ-
ಜಲಪಾತಕ್ಕೆ ಚಾರಣ ನಡೆಸುವ ವೇಳೆ ಅಗತ್ಯ ಆಹಾರ ಕೊಂಡೊಯ್ಯಬೇಕು. ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ವನ್ಯಜೀವಿಗಳಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು. ಅನಗತ್ಯವಾಗಿ ನೀರಿಗೆ ಇಳಿಯುವುದು,ಕಲ್ಲು ಬಂಡೆ ಏರುವುದು ಮಾಡಬಾರದು. ಜಾರುವ ಕಲ್ಲು, ಆಳವಾದ ನೀರಿನ ಹೊಂಡಗಳ ಬಳಿ ಜಾಗೃತೆ ಅಗತ್ಯ.ಅರಣ್ಯ ಪರಿಸರದಲ್ಲಿ ಬೆಂಕಿ ಹಾಕುವುದನ್ನು ನಿಷೇಧಿಸಲಾಗಿದೆಸ್ಥಳೀಯ ಪರಿಚಯ ಇರುವವರು ಜತೆಗಿದ್ದರೆ ಉತ್ತಮ.ಸಂಜೆ ಬಳಿಕ ಚಾರಣಕ್ಕೆ ಅವಕಾಶ ಇರುವುದಿಲ್ಲ ಇತ್ಯಾದಿ ವಿಚಾರಗಳನ್ನು ಪರಾಮರ್ಶಿಸಿ ಚಾರಣಕ್ಕೆ ಸಿದ್ಧಗೊಳ್ಳಬೇಕಿದೆ.
ಬಂಡಾಜೆ ಜಲಪಾತ ಚಾರಣಕ್ಕೆ ತೆರೆಯಲಿದ್ದು ಕಾಡ್ಗಿಚ್ಚು ಅಥವಾ ಇನ್ನಿತರ ಅಪಾಯಕಾರಿ ಸನ್ನಿವೇಶಗಳು ಎದುರಾದಲ್ಲಿ ಮತ್ತೆ ನಿಷೇಧ ಹೇರುವ ಸಾಧ್ಯತೆಯೂ ಇದೆ.

ಚಾರಣಕ್ಕೆ ಬರುವ ಮಂದಿ ಅರಣ್ಯ ಇಲಾಖೆಯ ವೆಬ್ ಸೈಟ್ ನಲ್ಲಿ ನೋಂದಾವಣೆ ಮಾಡುವುದು ಕಡ್ಡಾಯ. ನೋಂದಾವಣೆ ಮಾಡದೆ ಬರುವ ಮಂದಿಗೆ ಪ್ರವೇಶಾವಕಾಶ ಇರುವುದಿಲ್ಲ.ಚಾರಣಿಗರು ಇಲಾಖೆ ಸೂಚಿಸುವ ಎಲ್ಲಾ ನಿಯಮಗಳನ್ನು ಪಾಲಿಸಿ ಮುಂದುವರಿಯಬೇಕು ಎಂದು ಶರ್ಮಿಷ್ಠಾ,ಆರ್ ಎಫ್ ಒ,
ವನ್ಯಜೀವಿ ವಿಭಾಗ ಬೆಳ್ತಂಗಡಿ ಇವರು ತಿಳಿಸಿದ್ದಾರೆ

NO COMMENTS

LEAVE A REPLY

Please enter your comment!
Please enter your name here

Exit mobile version