
ಬೆಳ್ತಂಗಡಿ; ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ದುಷ್ಕರ್ಮಿಗಳು ಧರ್ಮಸ್ಥಳ ಗ್ರಾಮದ ಪುದುವೆಟ್ಟು ಕ್ರಾಸ್ ಬಳಿ ಕಲ್ಲು ಹೊಡೆದು ಬಸ್ಸಿಗೆ ಹಾನಿಯುಂಟುಮಾಡಿದ ಘಟನೆ ಮಂಗಳವಾರ ಸಂಭವಿಸಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಡಿಪ್ಪೋದ ಸಂಚಾರ ನಿಯಂತ್ರಕ ಪಿ ದಾವೂದ್ ಎಂಬವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳವಾರ ಮಧ್ಯಾಹ್ನದ ವೇಳೆ ಕೆ.ಎ 21 ಎಫ್ 0103 ನಂಬರ್ ನ ಬಸ್ಸನ್ನು ಚಾಲಕ ಧರ್ಮಸ್ಥಳ ದಿಂದ ಸುಬ್ರಹ್ಮಣ್ಯದ ಕಡೆಗೆ ಚಲಾಯಿಸುತ್ತಿದ್ದ ವೇಳೆ ಧರ್ಮಸ್ಥಳ ಗ್ರಾಮದ ಪುದುವೆಟ್ಟು ಕ್ರಾಸ್ ಸಮೀಪ ಎದುರಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ಸವಾರನೋರ್ವ ಬಸ್ಸಿನ ಮುಂಭಾಗದ ಗ್ಲಾಸಿಗೆ ಕಲ್ಲು ಹೊಡೆದಿದ್ದು ಗ್ಲಾಸ್ ಓಡೆದು ಹೋಗಿದೆ. ಇದರಿಂದ ಸುಮಾರು 15ಸಾವಿ ರೂ ನಷ್ಟ ಸಂಭವಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೆ.ಎಸ್.ಆರ್.ಟಿ ಸಿ ನೌಕರರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು ಜಿಲ್ಲೆಯಲ್ಲಿ ಸಂಸ್ಥೆಯ ನೌಕರರು ಪ್ರತಿಭಟನೆಗೆ ಬೆಂಬಲ ಸೂಚಿಸದೆ ಇರುವ ಹಿನ್ನಲೆಯಲ್ಲಿ ಮುಷ್ಕರಕ್ಕೆ ಬೆಂಬಲ ಸೂಚಿಸಿರುವ ಸಂಘಟನೆಗಳಿಗೆ ಸೇರಿರುವವರು ಬಸ್ಸಿಗೆ ಕಲ್ಲೆಸೆದಿರಬಹುದು ಎಂಬ ಅನುಮಾನಗಳೂ ವ್ಯಕ್ತವಾಗುತ್ತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.