
ಬೆಳ್ತಂಗಡಿ:ಪಿಲ್ಯ ಗ್ರಾಮದ ಉಲ್ಫೆ ಪರಿಸರದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಉಲ್ಫೆಯ ಕೆರೆ ಬಳಿಯ ನಿವಾಸಿ ಚೀಂಕ್ರ ಎಂಬವರ ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಸೋಮವಾರ ತಡರಾತ್ರಿ ಚಿರತೆ ಕಚ್ಚಿ ಗಾಯಗೊಳಿಸಿದೆ. ಈ ವೇಳೆ ಮನೆಯವರು ಎಚ್ಚೆತ್ತ ಕಾರಣ ನಾಯಿಯನ್ನು ಬಿಟ್ಟ, ಚಿರತೆ ಸಮೀಪದ ಕಾಡಿನ ಕಡೆ ತೆರಳಿದೆ.
ಕಳೆದ ತಿಂಗಳು ಇಲ್ಲಿಗೆ ಸಮೀಪದ ಸತೀಶ್ ತಾಮನ್ಕರ್ ಎಂಬವರ ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ಮನೆಯ ಜಗಲಿಯವರೆಗೂ ಓಡಾಟ ನಡೆಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.
-ಬೋನು ಅಳವಡಿಕೆ-
ವೇಣೂರು ವಲಯ ಅರಣ್ಯ ಇಲಾಖೆಯ ಅಳದಂಗಡಿ ಶಾಖೆಯ ವತಿಯಿಂದ ಮಂಗಳವಾರ ಇಲ್ಲಿ ಬೋನು ಇಡಲಾಗಿದೆ. ವಲಯ ಅರಣ್ಯ ಅಧಿಕಾರಿ ಭರತ್ ಮಾರ್ಗದರ್ಶನದಲ್ಲಿ ಅಳದಂಗಡಿ ಶಾಖೆಯ ಉಪ ವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಗಸ್ತು ಅರಣ್ಯ ಪಾಲಕ ಮಂಜುನಾಥ್, ಅರಣ್ಯ ವೀಕ್ಷಕ ಪೂವಪ್ಪ ಹಾಗೂ ಸ್ಥಳೀಯರು ಸಹಕರಿಸಿದರು.