ಬೆಳ್ತಂಗಡಿ : ಜೂ. 21- ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಭಿವೃದ್ಧಿ ರಹಿತ ವಂಶಾಡಳಿತ, ಕೋಮು ಧ್ರುವೀಕರಣದ ರಾಜಕೀಯ, ನ್ಯಾಯ ನಿರಾಕರಣೆ, ಹಕ್ಕುಗಳಿಂದ ವಂಚನೆ, ಅಧಿಕಾರಶಾಹಿಗಳಿಂತ ದಲಿತರ, ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಇತ್ಯಾದಿಗಳಿಂದ ಬೇಸತ್ತು ಭಯ ಮುಕ್ತ; ಹಸಿವು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜೂನ್ 21, 2009ರಲ್ಲಿ ಉದಯವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಂಬ ಪಕ್ಷ ಆರಂಭ ಕಾಲದಿಂದಲೇ ಹೋರಾಟ ರಂಗದಲ್ಲಿ ಮುಂಚೂಣಿಯಲ್ಲಿ ತೊಡಗಿಕೊಂಡು ಆಡಳಿತ ಪಕ್ಷಗಳ ದುರಾಡಳಿತದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಾ ಆಡಳಿತ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ದಮನಿತರ ಮನೆಮಾತಾಗಿ ಬೆಳೆಯುತ್ತಿದೆ. ಈ ಹೋರಾಟ ರಾಜಕೀಯದ ಹಾದಿಯಲ್ಲಿ ರಾಜಿಯಾಗುವುದಕ್ಕಿಂತ ಜೈಲೇ ಲೇಸು ಎಂದು ಅನ್ಯಾಯದ ವಿರುದ್ಧ ಒಂದಿಂಚೂ ಸಹ ಹಿಂದೆ ಸರಿಯದೆ ನಿರಂತರವಾಗಿ ದೇಶದ ಉದ್ದಗಲಕ್ಕೂ ನಿತ್ಯ ನಿರಂತರ ಹೋರಾಟ ಸಂಘಟಿಸುವ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧದ ಹೋರಾಟದ ಸಂದರ್ಭದಲ್ಲಿ, ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿ ಸುಳ್ಳು ಪ್ರಕರಣ ದಾಖಲಿಸಿ ಜೈಲಿನಲ್ಲಿ ಅಕ್ರಮವಾಗಿ ಬಂಧಿಸಿಡಲಾಗಿದೆ. ಜೈಲುಗಳ ಮೂಲಕ ಅಥವಾ ಲಾಠಿಗಳ ಮೂಲಕ ಈ ರಾಜಕೀಯ ಚಳುವಳಿಯನ್ನು ದಮನಿಸಬಹುದು ಎಂದು ಭಾವಿಸಿದರೆ ಅದು ನಿರಂಕುಶವಾದಿ ಪ್ರಭುತ್ವದ ಮೂರ್ಖತನ ಎಂದು ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಎಸ್ ಹೇಳಿದರು. ಅವರು ಪಕ್ಷದ 17ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬೆಳ್ತಂಗಡಿಯ ಪಕ್ಷದ ಕಛೇರಿಯಲ್ಲಿ ನಡೆದ ಜಿಲ್ಲಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭಾ ಕಾರ್ಯಕ್ರಮದ ಮುಂಚಿತವಾಗಿ ಕಛೇರಿ ಮುಂಭಾಗದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಎಸ್ಡಿಪಿಐ ಯು ಸಂವಿಧಾನವನ್ನು ಅಪ್ಪಿಕೊಂಡಿದ್ದು, ಇಲ್ಲಿ ಮೋಸ, ವಂಚನೆಗೆ ಅವಕಾಶವಿಲ್ಲ. ನಮ್ಮಲ್ಲಿ ಕಾಯಕ ಮಾಡುವಂತಹ ಸೇವಕರು ಇರುವುದೇ ಹೊರತು ಯಾವುದೇ ರೀತಿಯ ನಾಯಕರುಗಳು ಇಲ್ಲ ಎಂದು ಹೇಳಿದರು.
ಸಂಸ್ಥಾಪನಾ ದಿನವನ್ನು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಾಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜವಾದಿ ಚಿಂತಕರಾದ ದಾಮೋದರ್ ಬಿ, ರಾಜ್ಯ ಸಮಿತಿ ಸದಸ್ಯರಾದ ಅಶ್ರಫ್ ಅಗ್ನಾಡಿ, ಸಯ್ಯಿದ್ ಇಬ್ರಾಹೀಮ್ ಅಲ್ ಹಾದಿ ತಙಳ್ ಆತೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದ ನಡುವೆ ಹಲವರನ್ನು ಪಕ್ಷಕ್ಕೆ ಸೇರ್ಪಡೆ ಗೊಳಿಸಲಾಯಿತು.
ವೇದಿಕೆಯಲ್ಲಿ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ, ಜಿಲ್ಲಾ ಕಾರ್ಯದರ್ಶಿಗಳಾದ ನವಾಝ್ ಷರೀಫ್ ಕಟ್ಟೆ, ಅಶ್ರಫ್ ತಲಪಾಡಿ, ಬೆಳ್ತಂಗಡಿ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಜಿಲ್ಲಾ ಸಮಿತಿ ಸದಸ್ಯರಾದ ಅಡ್ವೋಕೇಟ್ ಕಬೀರ್ , ಅಬೂಬಕ್ಕರ್ ಮದ್ವ, ಹನೀಫ್ ಪುಂಜಾಲಕಟ್ಟೆ, ವುಮೆನ್ಸ್ ಇಂಡಿಯಾ ಮೊಮೆಂಟ್ ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷೆ ಸಮಾ ಅಲಿ ಉಪಸ್ಥಿತರಿದ್ದರು.
ರವೂಫ್ ಪೂಂಜಾಲ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು