
ಬೆಳ್ತಂಗಡಿ : ಕಂದಾಯ, ತಾಲೂಕು ಪಂಚಾಯತ್, ಅರಣ್ಯ, ಕೋಪರೇಟಿವ್ ಸೊಸೈಟಿ, ಸಮಾಜ ಕಲ್ಯಾಣ, ಸರ್ವೇ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಬಗ್ಗೆ ಒಟ್ಟು 28 ದೂರುಗಳು ಸಲ್ಲಿಕೆಯಾಗಿದ್ದು ಈ ಪೈಕಿ ಎರಡು ದೂರುಗಳನ್ನು ಫಾರ್ಮ್ 1,2ರಲ್ಲಿ ರಿಜಿಸ್ಟರ್ ಮಾಡಿ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಇನ್ನೂ ಉಳಿದ ದೂರಗಳಿಗೆ ಕಾಲಮಿತಿಯಲ್ಲಿ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಲೋಕಾಯುಕ್ತ ಪ್ರಭಾರ ಅಧೀಕ್ಷಕ ಕುಮಾರಚಂದ್ರ ಹೇಳಿದರು.
ಜೂ.16ರಂದು ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ನಡೆದ “ಲೋಕಾಯುಕ್ತ ಜನ ಸಂಪರ್ಕ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮ ಮಟ್ಟದಲ್ಲಿ ಭ್ರಷ್ಟಚಾರ ಕುರಿತು ಜಾಗೃತಿ ಮೂಡಿಸಲು ಗ್ರಾಮ ಸಭೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಲು ಅವಕಾಶ ಕಲ್ಪಿಸಲು ಜಿ.ಪಂ.ಸಿಇಒ ಅವರಿಗೆ ಮನವಿ ಮಾಡಲಾಗಿದೆ. ಪೂರಕ ದಾಖಲೆಗಳವುಳ್ಳ ದೂರುಗಳನ್ನು ಲೋಕಾಯುಕ್ತ ಸಲ್ಲಿಸಬಹುದು ಸುಳ್ಳು ಕೇಸ್ ಸಲ್ಲಿಸಿದವರ ಮೇಲೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ಲೋಕಾಯುಕ್ತರಿಗೆ ಬಂದ ದೂರುಗಳ ವಿವರ;
ಲಾಯಿಲ ಗ್ರಾಮ ಪಂಚಾಯತ್ ಪಕ್ಕದಲ್ಲಿರುವ ಸರ್ವೆ ನಂಬರ್ 128/10-P2 ರಲ್ಲಿ ಅಜಾದ್ ಬೀಡಿ ಎಂ/ಎಸ್ ಸುಂದರ್ ಲಾಲ್ ಮೂಲ್ ಚಂದ್ ಜೈನ್ ಟ್ಯೂಬ್ಯಾಜೊನಿಸ್ಟ್ ಪ್ರೈಂ ಕಂಪನಿಯೂ ಸುಮಾರು 2009 ರಿಂದ ಕಾರ್ಯಾಚರಿಸುತ್ತಿದ್ದು ಈ ಕಟ್ಟಡಕ್ಕೆ ಸರಿಯಾದ ದಾಖಲೆಗಳು, ಪಂಚಾಯತ್ ಆದೇಶಗಳು, ಸಂಬಂಧಪಟ್ಟ ಇಲಾಖೆಯ ಅನುಮತಿ ಪತ್ರ ಇಲ್ಲದೆ ನಡೆಸುತ್ತಿದ್ದು ಈ ಬಗ್ಗೆ ದಿನಾಂಕ 12-05-2025 ರಂದು ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕಂಪನಿ ಮತ್ತು ತಪ್ಪಿತಸ್ಥರ ವಿರುದ್ಧ-ಕ್ರಮ ಕೈಗೊಳ್ಳಲು ದೂರು ನೀಡಿಲಾಗಿದೆ ಆದರೆ ಈ ವರೆಗೆ ಅಭಿವೃದ್ಧಿ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳದೆ ಯಾವುದೇ ಹಿಂಬರಹವನ್ನು ನೀಡದೆ ಕರ್ತವ್ಯ ಲೋಪ ಎಸಗಿರುವ ಬಗ್ಗೆ ಲಾಯಿಲ ನಿವಾಸಿ ಪ್ರತೀಕ್ ದೂರು ಸಲ್ಲಿಸಿದರು.
ನಿಟ್ಟಡೆ ಗ್ರಾಮದ ಸತೀಶ್ ಪೂಜಾರಿ ಅವರು ಮನೆ ನಿವೇಶನದ ಹಕ್ಕುಪತ್ರಕ್ಕೆ ಪಹಣಿ ದಾಖಲಿಸುವಂತೆ 2023 ಮೇಯಲ್ಲಿ ಅರ್ಜಿ ಸಲ್ಲಿಸಲಾಗಿದೆ ಈ ಬಗ್ಗೆ ಹಲವಾರು ಬಾರಿ ವಿಚಾರಿಸಿದರೂ ಯಾವುದೇ ಪ್ರತ್ಯುತ್ತರ ಸಿಗದೆ ಬೇಸತ್ತು ಹೋಗಿರುವುದಾಗಿ ತಿಳಿಸಿದರು. ಪ್ಲಾಟಿಂಗ್ ಮಾಡಲು 2023ರಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ ಆದರೆ ಇದುವರೆಗೂ ಈ ಬಗ್ಗೆ ಯಾವುದೇ ಮಾಹಿತಿ ನಮಗೆ ನೀಡಿಲ್ಲ ಎಂದು ನಿಟ್ಟಡೆ ಗ್ರಾಮದ ಜರ್ನಾದನ ತಿಳಿಸಿದರು. ಈ ಬಗ್ಗೆ ಪರಿಶೀಲಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದರು.
ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ದ ಬಾಲಸುಬ್ರಹ್ಮಣ್ಯ ಭಟ್ ಜೆ ದೂರು ನೀಡಿದರು.
ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಭಾರ ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ ಅಧಿಕಾರಿಗಳು ಸಾರ್ವಜನಿಕರ ಸೇವೆಗಾಗಿ ಇರುವುದು ಅವರನ್ನು ಪದೇ ಪದೇ ಸತಾಯಿಸುವ ಕಾರ್ಯ ಮಾಡಬಾರದು. ಇತ್ತೀಚೀನ ದಿನಗಳಲ್ಲಿ ಶಿಕ್ಷಣ ಇಲಾಖೆಯ ವಿರುದ್ಧ ಅನೇಕ ದೂರುಗಳು ಬುರುತ್ತಿದೆ. ಪಿಂಚಣಿ, ರಜೆ, ವೇತನ ಪಡೆಯಲು ಲಂಚ ನೀಡುವ ಸ್ಥಿತಿ ಇದ್ದು ದೂರ ನೀಡಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ.
ಗುತ್ತಿಗೆದಾರಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ವಿರುದ್ಧ ದೂರು ಬಂದರೂ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದ ಅವರು ಶಾಲೆಗಳ ಸುರಕ್ಷತೆ ಮೇಲೆ ನಿಗಾ ವಹಿಸಬೇಕು. ಸರಕಾರಿ ಕಚೇರಿ, ಹಾಸ್ಟೆಲ್ ಶಾಲೆಗಳಿಗೆ ಅನೀರಿಕ್ಷಿತಾ ಭೇಟೆ ಮಾಡಲಾಗುವುದು ಎಂದರು.
ವಿದ್ಯಾರ್ಥಿಗಳು ವಸತಿ ನಿಲಯ ಕುರಿತು ಮಾಹಿತಿ ಪಡೆದರು. ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ 14 ಹಾಸ್ಟೆಲ್ಗಳ ಪೈಕಿ 5 ಹಾಸ್ಟೆಲ್ಗಳ್ಲಿ ಬೆಡ್ ಮತ್ತು ಕ್ವಾಟ್ ವ್ಯವಸ್ಥೆ ಇದೆ, ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಜೋಸೆಫ್ ಮಾಹಿತಿ ನೀಡಿದರು. ತಾಲೂಕು ಕಚೇರಿಯ 10, ತಾಲೂಕು ಪಂಚಾಯತ್ 7, ಅರಣ್ಯ ಇಲಾಖೆ 2, ಸರ್ವೇ, ಸಮಾಜ ಕಲ್ಯಾಣ, ಪೊಲೀಸ್, ಕೋಪರೇಟಿವ್ ಸೊಸೈಟಿ ಹಾಗೂ ಶಿಕ್ಷಣ ಇಲಾಖೆಗಳ ಮೇಲೆ ತಲಾ ಒಂದು ದೂರುಗಳು ಬಂದಿದ್ದು ಜಮೀನು ಖಾತೆ, ಪ್ಲಾಂಟಿಗ್ ಕುರಿತು ಹೆಚ್ಚಿನ ಅಹವಾಲು ಬಂದಿದೆ ಎಲ್ಲವನ್ನು ಕಾಲಮಿತಿಯಲ್ಲಿ ಪರಿಶೀಲನೆ ನಡೆಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಡಿವೈಎಸ್ಪಿ ಸುರೇಶ್ ಕುಮಾರ್.ಪಿ, ತಾ.ಪಂ. ಇಒ ಭವಾನಿಶಂಕರ್ ಎನ್, ತಹಶೀಲ್ದಾರ್ ಪ್ರಥ್ವಿ ಸಾನಿಕಂ, ಇನ್ಸ್ಪೆಕ್ಟರ್ ಭಾರತಿ.ಪಿ ಮತ್ತು ಚಂದ್ರಶೇಖರ್ ಕೆ.ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೋಕಾಯುಕ್ತ ಸಿಬ್ಬಂದಿಗಳಾದ ಮಹೇಶ್, ನಾಗಪ್ಪ, ಯತೀಶ್, ರಾಜಶೇಖರ್, ದುಂಡಪ್ಪ, ಗಂಗಣ್ಣ, ವಿವೇಕ್, ತಾಲೂಕು ಮಟ್ಟದ ಅಧಿಕಾರಿಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.