
ಕಡಬ: ಕಡಬ ತಾಲೂಕಿನಲ್ಲಿ ಇಚ್ಚಂಪಾಡಿ ಗ್ರಾಮದ ಸೇತುವೆ ಬಳಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಮೃತಪಟ್ಟ ಯುವಕನು ಚೇತನ್ ಶೆಟ್ಟಿ (21) ಎಂದು ಗುರುತಿಸಲಾಗಿದ್ದು, ಇವನು ಇಚ್ಚಂಪಾಡಿ ಗ್ರಾಮದ ಪಾನ ಕೆಡೆಂಬೇಲು ಮನೆ ನಿವಾಸಿ ರಾಮಣ್ಣ ಶೆಟ್ಟಿ ಎಂಬವರ ಪುತ್ರ. ಯುವಕನು ಮಂಗಳೂರಿನಲ್ಲಿ ಮೆಡಿಕಲ್ ರೆಪ್ ಕೆಲಸ ಮಾಡುತ್ತಿದ್ದು ರಜೆಯ ಸಂದರ್ಭ ಮನೆಯಲ್ಲೇ ಇದ್ದನು.
ಕ್ರಿಕೆಟ್ ಆಡಲು ಹೊರಟ ಚೇತನ್ ಶೆಟ್ಟಿ, ಮಧ್ಯಾಹ್ನದ ವೇಳೆಗೆ ಸ್ನೇಹಿತರ ಜೊತೆ ಇಚ್ಚಂಪಾಡಿ ಸೇತುವೆ ಬಳಿ ಇರುವ ಗುಂಡ್ಯ ಹೊಳೆಗೆ ಸ್ನಾನಕ್ಕೆ ಇಳಿದನು. ಆದರೆ ಹೊಳೆಯ ನೀರಿನ ಆಳತೆ ಅರಿಯದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಸ್ಥಳೀಯರು ಚೇತನನನ್ನು ನೀರಿನಿಂದ ಹೊರತೆಗೆದಿದ್ದರೂ. ಆ ವೇಳೆಗೆ ಆತ ಪ್ರಾಣ ಕಳೆದುಕೊಂಡಿದ್ದ.
ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು,
ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.