


ಬೆಳ್ತಂಗಡಿ: ದೇಶದ ಕಟ್ಟಕಡೆಯ ಜನರೂ ಅಭಿವೃದ್ಧಿಯ ಫಲವನ್ನು ಉಣ್ಣಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯ ಹೀಗಾಗಿ ಗ್ರಾಮಾಂತರ ಪ್ರದೇಶದ ಉನ್ನತಿಗೆ ಹಗಲು ರಾತ್ರಿ ದುಡಿಯುವ ಸಂಕಲ್ಪ ನನ್ನದು ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.
ಅವರು ಪಿ.ಎಂ.ಜನ್ ಮನ್ ಯೋಜನೆಯಡಿ ರೂ. 6.8 ಕೋಟಿ ವೆಚ್ಚದಲ್ಲಿ ನಡೆಯಲಿರುವ ಸುಲ್ಕೇರಿ ಗ್ರಾ.ಪಂ. ನ ಸುಲ್ಕೇರಿಯಿಂದ ಅಂಟ್ರಿಂಜೆ ತನಕದ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕೊರಗ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.ಎಲ್ಲಾ ಸ್ತರಗಳಲ್ಲಿ ಕೊರಗ ಸಮಾಜದ ಬಂಧುಗಳನ್ನು ಗಟ್ಟಿಗೊಳಿಸಿ ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ಜೋಡಿಸುವ ದೃಷ್ಟಿಯಿಂದ ಪಿಎಂ ಜನ್ ಮನ್ ಯೋಜನೆ ಜಾರಿಯಲ್ಲಿದೆ ಎಂದ ಅವರು ಕೊರಗ ಸಮಾಜದ ಬಂಧುಗಳಿಗೋಸ್ಕರ ದ.ಕ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ರೂ.60 ಲಕ್ಷ ವೆಚ್ಚದಲ್ಲಿ ಮಾಹಿತಿ ಸೆಂಟರ್ ನಿರ್ಮಾಣವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್,ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ,ಸುಲ್ಕೇರಿ ಪಂಚಾಯತ್ ಅಧ್ಯಕ್ಷೆ ಗಿರಿಜಾ,ಉಪಾಧ್ಯಕ್ಷ ಶುಭಕರ ಬಂಗೇರ,ಮಾಜಿ ಅಧ್ಯಕ್ಷರಾದ ನಾರಾಯಣ ಪೂಜಾರಿ,ಯಶೋಧ ಎಲ್ ಬಂಗೇರ,ಬಿಜೆಪಿ ಮುಖಂಡ ಸದಾನಂದ ಪೂಜಾರಿ ಉಂಗಿಲಬೈಲು, ತಾ.ಪಂ ಮಾಜಿ ಸದಸ್ಯ ಸುಧೀರ್ ಆರ್ ಸುವರ್ಣ,ನಾರಾವಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಗೌಡ,ಲಯನ್ಸ್ ಕ್ಲಬ್ ಅಧ್ಯಕ್ಷ ರವಿ ಶೆಟ್ಟಿ, ಸುಲ್ಕೇರಿ ಗ್ರಾ.ಪಂ ಸದಸ್ಯರಾದ ಪೂರ್ಣಿಮಾ,ಪ್ರೇಮಾ, ಹಾಗೂ ಇತರರು ಉಪಸ್ಥಿತರಿದ್ದರು.
ವಿಜಯ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿ,ಸ್ವಾಗತಿಸಿದರು.
