

ಬೆಳ್ತಂಗಡಿ; ದಯಾ ವಿಶೇಷ ಶಾಲೆಯಲ್ಲಿ ಶನಿವಾರದಂದು ಪೋಷಕರ ಸಭೆ ಮತ್ತು ಆಪ್ತಸಮಾಲೋಚನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ವೇದಿಕೆಯಲ್ಲಿದ್ದ ಸಂಸ್ಥೆಯ ಸಂಚಾಲಕರು ಹಾಗೂ ನಿರ್ದೇಶಕರು ಆದ ವಂ. ಫಾದರ್. ವಿನೋದ್ ಮಸ್ಕರೇನ್ಹಸ್ರವರು ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿ ಶಾಲೆಯಲ್ಲಿ ಇಂದು ಪೋಷಕರ ಸಭೆ ಮತ್ತು ಆಪ್ತ ಸಮಾಲೋಚನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೋಷಕರು ಮಕ್ಕಳ ಸಮಸ್ಯೆಗಳ ಬಗ್ಗೆ ಅರಿತುಕೊಂಡಿರಬೇಕು, ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೋಷಕರು ಪ್ರೋತ್ಸಾಹವನ್ನು ನೀಡುವುದು, ಅವರ ಮುಂದಿನ ಭವಿಷ್ಯದ ಕಡೆಗೆ ಗಮನ ಹರಿಸುವುದು ಮುಂತಾದ ವಿಚಾರಗಳ ಬಗ್ಗೆ ತಿಳಿಸಿದರು. ಸಂಸ್ಥೆಯಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಕರಕುಶಲ ತರಬೇತಿಗಳನ್ನು ಪೋಷಕರು ಕಲಿತುಕೊಂಡು ಮನೆಯಲ್ಲಿ ಬಿಡುವಿನ ಸಮಯದಲ್ಲಿ ಅವನ್ನು ತಯಾರಿಸಿ ಇದರ ಲಾಭವನ್ನು ಪಡೆಯಬಹುದು ಹಾಗೂ ಮಕ್ಕಳೊಂದಿಗೆ ಈ ಸ್ವ-ಉದ್ಯೋಗವನ್ನು ಮಾಡುತ್ತಿದ್ದರೆ ಅವರಿಗೂ ಉತ್ತೇಜನ, ಪ್ರೇರಣೆ ನೀಡಿದಂತಾಗುತ್ತದೆ ಹಾಗೂ ಮಕ್ಕಳ ಅಭಿವೃದ್ದಿಗೆ ಒಂದು ಪೂರಕ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಂತಾಗುವುದು ಹಾಗೂ ಈ ಕರಕುಶಲ ವಸ್ತುಗಳ ತಯಾರಿಕೆಗೆ ಅಗತ್ಯಬಿಳುವ ಸಾಮಗ್ರಿಗಳನ್ನು ಸಂಸ್ಥೆಯೇ ಒದಗಿಸಿಕೊಡುವುದು. ಈ ನಿಟ್ಟಿನಲ್ಲಿ ಎಲ್ಲಾ ಪೋಷಕರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಂದಿನ ದಿನಗಳಲ್ಲಿ ಶಾಲೆಯ ಶಾಲಾ ವಾರ್ಷಿಕೋತ್ಸವವನ್ನು ಆಚರಿಸುವ ಬಗ್ಗೆ ಚರ್ಚಿಸಲಾಯಿತು. ಹಾಗೆಯೇ ಡಿಸೆಂಬರ್ ತಿಂಗಳಿನಲ್ಲಿ ದಯಾ ವಿಶೇಷ ಶಾಲೆಯ ವಿಶೇಷ ಮಕ್ಕಳ ಜೀವನೋಪಾಯಕ್ಕಾಗಿ ನಡೆಸಲಾದ “ದಯಾ ಫಿಯೆಸ್ತಾ 2024” ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲಾ ಪೋಷಕರನ್ನು ಅಭಿನಂದಿಸಲಾಯಿತು. ತದನಂತರ ಪೋಷಕರಿಗೆ ಆಪ್ತಸಮಾಲೋಚನಾ ಕಾರ್ಯಕ್ರಮವನ್ನು ಮೆರಿನ್ ರವರು ನೆರವೇರಿಸಿಕೊಟ್ಟರು. ಮಕ್ಕಳಲ್ಲಿನ ವಿವಿಧ ವೈಕಲ್ಯತೆಯ ಪ್ರಕಾರಗಳು ಹಾಗೂ ಅದರ ನಿಭಾಯಿಸುವ ಬಗ್ಗೆ ತಿಳಿಸಿ ಕೊಡಲಾಯಿತು. ತದನಂತರ ಮುಖ್ಯಶಿಕ್ಷಕರು ಹಾಗೂ ತರಗತಿ ಶಿಕ್ಷಕರು ಪೋಷಕರೊಂದಿಗೆ ಮಕ್ಕಳ ಪ್ರಗತಿಯ ಬಗ್ಗೆ ವಿಚಾರ ವಿನಿಮಯ ನಡೆಸಿದರು,
ಈ ಕಾರ್ಯಕ್ರಮವನ್ನು ಶಿಕ್ಷಕ ರಮೇಶ್ ಹೆಚ್ ಕೆ ರವರು ನಿರೂಪಿಸಿ, ಸರ್ವರನ್ನು ಸ್ವಾಗತಿಸಿದರು, ಮುಖ್ಯ ಶಿಕ್ಷಕಿ ದಿವ್ಯ ಟಿ ವಿ ರವರು ಧನ್ಯವಾದವಿತ್ತರು.