
ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರಿದಿದೆ.
ಶುಕ್ರವಾರ ರಾತ್ರಿಯ ವೇಳೆ ಧರ್ಮಸ್ಥಳ ಪೊಸೊಳಿಕೆ ನಿವಾಸಿ ಕೃಷ್ಣಪ್ಪ ಅವರ ಮನೆಯ ಸಮೀಪದ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ ಹಾಗೂ ಅಡಿಕೆ ಗಿಡಗಳನ್ನು, ಮರಗೆಣಸಿನ ಗಿಡಗಳನ್ನು ನಾಶಗೊಳಿಸಿದೆ. ತೋಟದಲ್ಲಿದ್ದ ಬಾಳೆಗಿಡಗಳನ್ನು ಸಂಪೂರ್ಣವಾಗಿ ಮುರಿದು ಹಾಕಿದ್ದು ಮನೆಯ ಸಮೀಪವೇ ಆನೆಗಳು ಓಡಾಟ ನಡೆಸಿದ್ದು ಜನರಲ್ಲಿ ಭಯಮೂಡಿಸಿದೆ.


ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪದ ನಿವಾಸಿ ಕ್ಸೇವಿಯರ್ ಎಂಬವರ ತೋಟಕ್ಕೆ ನುಗ್ಗಿದ ಕಾಡನೆಗಳು ಭಾರೀ ಪ್ರಮಾಣದಲ್ಲಿ ಅಡಿಕೆ ಕೈಷಿಗೆ ಹಾನಿಯುಂಟು ಮಾಡಿದೆ. ಫಸಲು ಬರುವ ಸುಮಾರು ಹತ್ತಕ್ಕೂ ಅಧಿಕ ಅಡಿಕೆ ಮರಗಳನ್ನು ನೆಲಕ್ಕುರುಳಿಸಿದೆ. ದೊಡ್ಡ ತೆಂಗಿನ ಮರಗಳನ್ನೂ ನೆಲಕ್ಕೆ ಉರುಳಿಸಿದೆ. ಇಲ್ಲಿ ತೋಟದಲ್ಲಿ ಹಾಕಲಾಗಿದ್ದ ನೀರಿನ ಪೈಪ್ ಗಳನ್ನು ಸಂಪೂರ್ಣವಾಗಿ ಆನೆಗಳು ಪುಡಿ ಗೈದಿದ್ದು ಭಾರೀ ನಷ್ಟ ಸಂಭವಿಸಿದೆ. ಒಂದಕ್ಕಿಂತಲೂ ಹೆಚ್ಚು ಆನೆಗಳು ಇಲ್ಲಿ ಓಡಾಟ ನಡೆಸಿರುವುದು ಕಂಡು ಬಂದಿದೆ. ಇಲ್ಲಿ ಧರ್ಮಸ್ಥಳ ನೇರ್ತನೆ ರಸ್ತೆಯ ಬದಿಯಲ್ಲಿಯೇ ಆನೆಗಳು ಓಡಾಟ ನಡೆಸುತ್ತಿದ್ದು ಸಂಜೆಯಾದರೆ ರಸ್ತೆಯಲ್ಲಿ ಸಂಚರಿಸಲು ಜನರು ಭಯಪಡುತ್ತಿದ್ದಾರೆ.
ಧರ್ಮಸ್ಥಳ ನೇರ್ತನೆ ಸಮೀಪವೇ ಅರಣ್ಯದಲ್ಲಿ ಕಾಡನೆಗಳು ಬೀಡು ಬಿಟ್ಟಿದ್ದು ಇಲ್ಲಿ ನಿರಂತರವಾಗಿ ಕೃಷಿಗೆ ಹಾನಿಯುಂಟು ಮಾಡುತ್ತಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯವನ್ನು ಮಾಡುವಂತೆ ಜನರು ಒತ್ತಾಯಿಸುತ್ತಿದ್ದಾರೆ



