ಬೆಳ್ತಂಗಡಿ : ಗುಂಡೂರಿ ಗ್ರಾಮದ ಕಜೆ, ಸಜಂಕಬೆಟ್ಟು ಪಲ್ಗುಣಿ ನದಿ ಪ್ರದೇಶದಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣೂರು ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವೇಣೂರು ಠಾಣೆ ಪಿಎಸ್ಐ ಅಕ್ಷಯ್ ಡವಗಿ ಅವರು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಹೊಸಂಗಡಿ, ಆರಂಬೋಡಿ ಹಾಗೂ ಪಡ್ಯಾರಬೆಟ್ಟು ಭಾಗಗಳಲ್ಲಿ ಸೆ.12ರಂದು ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಮಧ್ಯಾಹ್ನ 3.30ರ ಸುಮಾರಿಗೆ ಪಲ್ಗುಣಿ ನದಿಯಿಂದ ಮರಳು ತೆಗೆದು ಪಿಕಪ್ ವಾಹನಕ್ಕೆ ತುಂಬಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.ಮಾಹಿತಿ ಆಧರಿಸಿ ಪೊಲೀಸರು ಪಂಚರೊಂದಿಗೆ ಸಂಜೆ 4 ಗಂಟೆಗೆ ಸ್ಥಳಕ್ಕೆ ತೆರಳಿದಾಗ, ನದಿಯಿಂದ ಮರಳು ತೆಗೆದು KA-19-AB-5574 ನೋಂದಣಿಯ ಪಿಕಪ್ ವಾಹನಕ್ಕೆ ತುಂಬಿಸುತ್ತಿರುವುದು ಕಂಡುಬಂದಿದೆ. ಮರಳುಗಾರಿಕೆ ಹಾಗೂ ಸಾಗಾಟಕ್ಕೆ ಸಂಬಂಧಿಸಿದ ಪರವಾನಿಗೆ ಕುರಿತು ವಿಚಾರಿಸಿದಾಗ ಯಾವುದೇ ಪರವಾನಿಗೆ ಹೊಂದಿಲ್ಲವೆಂದು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿ ಸತೀಶ್ (34) ಹಾಗೂ ಕವನ್ (27) ಎಂಬವರು ಇದ್ದು, ಪಿಕಪ್ ವಾಹನದಲ್ಲಿ ಸುಮಾರು ಅರ್ಧ ಯುನಿಟ್ ಮರಳು ತುಂಬಿಸಲಾಗಿತ್ತು. ಮರಳಿನ ಅಂದಾಜು ಮೌಲ್ಯ 6,000 ಹಾಗೂ ಪಿಕಪ್ ವಾಹನದ ಮೌಲ್ಯ ಸುಮಾರು 2 ಲಕ್ಷ ಎಂದು ಅಂದಾಜಿಸಲಾಗಿದೆ.
ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಸರ್ಕಾರದ ರಾಜಸ್ವಕ್ಕೆ ನಷ್ಟ ಉಂಟು ಮಾಡುವ ಉದ್ದೇಶದಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಟಕ್ಕೆ ಯತ್ನಿಸಿದ ಆರೋಪದಡಿ ವೇಣೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಸತೀಶ್ (34) ಹಾಗೂ ಕವನ್ (27) ಎಂಬವರು ವಿರುದ್ಧ BNS ಕಲಂ 303(2), ಕರ್ನಾಟಕ ಅಲ್ಪ ಖನಿಜ ನಿಯಮಗಳು 1994ರ ಕಲಂ 42, 43, 44 ಹಾಗೂ MMRD ಕಾಯ್ದೆ 1957ರ ಕಲಂ 4(1), 4(1A), 21(1), 21(1A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿ ತನಿಖೆ ನಡೆಯುತ್ತಿದೆ.










