

ಬೆಳಂಗಡಿ; ಚಾರ್ಮಾಡಿ ಗ್ರಾಮದ ಅನಾರು ಪ್ರದೇಶದಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ ಕಾಡಾನೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ದಫನ ಮಾಡಲಾಯಿತು.
25 ರಿಂದ 30 ವರ್ಷದ ಹೆಣ್ಣು ಆನೆ ಆಗಿದ್ದು ಆನೆಯ ದೇಹದ ಹೊರಭಾಗದಲ್ಲಿ ಯಾವುದೇ ಗಾಯಗಳಿರಲಿಲ್ಲ. ಆನೆ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನು ಅಪ್ಪಿರುವುದಾಗಿ ಮರಣೋತ್ತರ ಪರೀಕ್ಷೆಯ ವೇಳೆ ಕಂಡು ಬಂದಿರುವುದಾಗಿ ಡಿಎಫ್ಓ ಅಂತೋಣಿ ಮರಿಯಪ್ಪ ಮಧ್ಯಮಗಳಿಗೆ ಮಾಹಿತಿ ನೀಡಿದರು.
ಆನೆ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಸಮರ್ಪಕವಾಗಿ ಆಹಾರ ಸೇವಿಸುತ್ತಿರಲಿಲ್ಲ. ಇದರಿಂದಾಗಿ ಸಂಪೂರ್ಣ ನಿತ್ರಾಣಕ್ಕೆ ಈಡಾಗಿತ್ತು ಎಂದು ಮಾಹಿತಿ ನೀಡಿದ ಅವರು ಗುರುವಾರ ಅನಾರೋಗ್ಯ ಪೀಡಿತ ಆನೆಯನ್ನು ಸ್ಥಳೀಯರು ನೋಡಿ ಇಲಾಖೆಗೆ ಮಾಹಿತಿ ನೀಡಿದ್ದು ಆನೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು ಆದರೆ ಕಾಡಾನೆ ಇದಕ್ಕೆ ಸ್ಪಂದಿಸಲಿಲ್ಲ ಎಂದು ಅವರು ತಿಳಿಸಿದರು.
ಭದ್ರತಾ ದೃಷ್ಟಿಯಿಂದ ಆನೆಯ ಹೊರಚಾಚಿದ ಎರಡು ದಂತಗಳನ್ನು ತೆಗೆದು ಬೆಳ್ತಂಗಡಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಬೆಳ್ತಂಗಡಿಯ ಡಾ. ರವಿ ಕುಮಾರ್.ಎಮ್, ಚಾರ್ಮಾಡಿ ಡಾ.ಯತೀಶ್ ಕುಮಾರ್.ಎಮ್.ಎಸ್ ಮರಣೋತ್ತರ ಪರೀಕ್ಷೆ ನಡೆಸಿದರು.
ಡಿಎಫ್ಓ ಅಂತೋಣಿ ಮರಿಯಪ್ಪ, ಎ.ಸಿ.ಎಫ್ ಕ್ಲಿಫರ್ಡ್ ಲೋಬೋ, ಬೆಳ್ತಂಗಡಿ ಆರ್.ಎಫ್.ಓ ಟಿ.ಎನ್.ತ್ಯಾಗರಾಜ್, ಚಾರ್ಮಾಡಿ ಡಿ.ವೈ.ಆರ್.ಎಫ್.ಓ ನಾಗೇಶ್.ಪಿ.ಜಿ. ಬೆಳ್ತಂಗಡಿ ಡಿ.ವೈಆರ್.ಎಫ್.ಓ ರವಿಚಂದ್ರ.ಕೆ, ಸಂತೋಷ್ ದೇವಾಡಿಗ, ಗಸ್ತು ಅರಣ್ಯ ಪಾಲಕ ರವಿ,ಪರಶುರಾಮ,ರವಿ ಕುಮಾರ್, ಅರಣ್ಯ ವೀಕ್ಷಕರಾದ ಗೋಪಾಲ, ಕಿಟ್ಟಣ್ಣ, ಮನೋಹರ್, ಅನಿಲ್, ಚಾಲಕ ಕುಶಲಪ್ಪ ಗೌಡ ಮತ್ತು ದಿವಾಕರ್, ಸ್ಥಳೀಯರಾದ ಸ್ನೇಕ್ ಅನಿಲ್, ಮುಂಡಾಜೆಯ ಸಚಿನ್ ಭೀಡೆ, ಜನಾರ್ದನ, ಕೃಷ್ಣಪ್ಪ ಹಾಗೂ ಇತರ ಸ್ಥಳೀಯರು ಆನೆಯ ದಫನ ಕಾರ್ಯದದಲ್ಲಿ ಸಹಕರಿಸಿದರು. ಆನೆಯನ್ನು ಸ್ಥಳದಲ್ಲಿಯೇ ಹಿಟಾಚಿ ಮೂಲಕ ಗುಂಡಿ ತೆಗೆದು ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ದಫನ ಮಾಡಲಾಯಿತು.
