ಬೆಳ್ತಂಗಡಿ:ರಸ್ತೆ ಕಾಮಗಾರಿ ಅಂಗವಾಗಿ ರಸ್ತೆ ಬದಿ ಹಾಕಲಾಗಿರುವ ತಾತ್ಕಾಲಿಕ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪ್ರಕರಣ ಬುಧವಾರ ತಡರಾತ್ರಿ ನಡೆದಿದೆ.
ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂಡಾಜೆಯ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಮುಂಭಾಗದಿಂದ ಹಾದುಹೋಗುವ ರಸ್ತೆಯ ಒಂದು ಬದಿ ನೂತನ ಸೇತುವೆ ರಚನೆ ಕಾಮಗಾರಿ ನಡೆಯುತ್ತಿದ್ದು ಇದು ಪೂರ್ಣಗೊಂಡಿಲ್ಲ. ಈ ರಸ್ತೆ ಮೂಲಕ ವಾಹನ ಸಂಚಾರ ನಡೆಸದಂತೆ ರಸ್ತೆ ಬದಿ ತಾತ್ಕಾಲಿಕ ತಡೆಗೋಡೆಯನ್ನು ಇರಿಸಲಾಗಿದೆ. ಚಾರ್ಮಾಡಿ ಕಡೆಯಿಂದ ಉಜಿರೆ ಕಡೆ ಹೋಗುತ್ತಿದ್ದ ಕಾರು ಇದಕ್ಕೆ ಡಿಕ್ಕಿಯಾಗಿದ್ದು ಕಾರಿಗೆ ಹಾನಿ ಉಂಟಾಗಿದೆ.ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದರೆ.
ಬೆಳ್ತಂಗಡಿ ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಹೆಚ್ಚಿನ ಕಡೆ ಕಾಮಗಾರಿ ಅರ್ಧಂಬರ್ಧ ನಡೆದಿದ್ದು ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸರಿಯಾದ ಸೂಚನಾ ಫಲಕ, ರೆಫ್ಲೆಕ್ಟರ್ ಗಳ ವ್ಯವಸ್ಥೆ, ಬೀದಿ ದೀಪಗಳ ವ್ಯವಸ್ಥೆಯು ಇಲ್ಲದಿರುವುದರಿಂದ ವಾಹನ ಸವಾರರು ಸಾಕಷ್ಟು ಪರದಾಟ ನಡೆಸುವಂತಾಗಿದೆ.



