ಬೆಳ್ತಂಗಡಿ: ತೆಂಗಿನಕಾಯಿ ಕೀಳಲು ಮರ ಏರಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಚಿಬಿದ್ರೆ ಗ್ರಾಮದ ಕುತ್ರಿಜಾಲಿನಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು ನಿಡ್ಲೆ ಗ್ರಾಮದ ಬೂಡುಜಾಲು ನಿವಾಸಿ ನಾರಾಯಣಗೌಡ ಎಂದು ಗುರುತಿಸಲಾಗಿದೆ. ಇವರು ಕಾರ್ಮಿಕರಾಗಿದ್ದು, ತೆಂಗಿನಕಾಯಿ ಕೀಳುವ ಕೆಲಸಕ್ಕಾಗಿ ಕುತ್ರಿಜಾಲಿಗೆ ತೆರಳಿದ್ದರು. ತೆಂಗಿನ ಮರ ಏರಿ ಕಾಯಿ ಕೀಳುತ್ತಿದ್ದ ವೇಳೆ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಈ ವೇಳೆ ಸಮೀಪದಲ್ಲಿ ಕಡಿದು ಹಾಕಲಾಗಿದ್ದ ಅಡಕೆ ಮರದ ತುಂಡಿನ ಭಾಗ ನಾರಾಯಣಗೌಡ ಅವರ ಮುಖದ ಮೂಲಕ ತಲೆಗೆ ತಾಗಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
