ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಪಡ್ಲಾಡಿಯ ನೇತಾಜಿ ಬಡಾವಣೆ ಪಕ್ಕದ ಸರ್ಕಾರಿ 116/1 ರಲ್ಲಿ ಗ್ರಂಥಾಲಯಕ್ಕೆ ಮೀಸಲಿಟ್ಟ ಜಾಗದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಮನೆ ಕಟ್ಟಡವನ್ನು ಬೆಳ್ತಂಗಡಿ ತಹಶೀಲ್ದಾರ್ ಅವರ ಆದೇಶದ ಮೇರೆಗೆ ಇದೀಗ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.
ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿರುವ ಸೂರಪ್ಪ ಮತ್ತು ರಾಜು ಮೇಸ್ತ್ರಿ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ಕಟ್ಟಡ ತೆರವುಗೊಳಿಸುವಂತೆ ಆದೇಶಿಸಿದ್ದರು.
ಅದರಂತೆ ಸೆ.4ರಂದು ಅಧಿಕಾರಿಗಳು ಕಟ್ಟಡ ತೆರವುಗೊಳಿಸಲು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುಧಾಕರ್ ಬಿ.ಎಲ್. ಹಾಗೂ ರಾಜು ಮೇಸ್ತ್ರಿ ಮಗ ಸುರೇಶ್ ಅವರು ಮೂರು ದಿನಗಳೊಳಗೆ ಕಟ್ಟಡವನ್ನು ತಾವೇ ತೆರವುಗೊಳಿಸುವುದಾಗಿ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿ ಕಾಲಾವಕಾಶ ಕೋರಿದ್ದರು. ನಿಗದಿತ ಅವಧಿಯಲ್ಲಿ ಕಟ್ಟಡ ತೆರವುಗೊಳಿಸದಿದ್ದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು.
ಅದರಂತೆ ಇದೀಗ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್.ನರಗುಂದ, ಕಂದಾಯ ನಿರೀಕ್ಷಕ ರಾಜು ಲಮಣಿ, ಲಾಯಿಲ ಗ್ರಾಮ ಪಂಚಾಯತ್ ಪಿಡಿಒ ತಾರಾನಾಥ್ ನಾಯ್ಕ್, ಗ್ರಾಮ ಆಡಳಿತ ಅಧಿಕಾರಿ ರನಿತಾ, ಗ್ರಾಮ ಸಹಾಯಕ ಸತೀಶ್ ಅವರ ಮುತುವರ್ಜಿಯಿಂದ ಅನಧಿಕೃತ ಕಟ್ಟಡವನ್ನು ಸಂಪೂರ್ಣವಾಗಿ ಅಕ್ರಮ ಕಟ್ಟಡ ಮಾಲೀಕರು ತೆರವುಗೊಳಿಸಿ ಕಂದಾಯ ಇಲಾಖೆಯ ಕಾನೂನು ಪಾಲನೆ ಮಾಡಿದ್ದಾರೆ.
