ಬೆಳ್ತಂಗಡಿ; ಆದಿವಾಸಿ ಸಮುದಾಯಗಳ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಬಗ್ಗೆ ವಿಧಾನ ಪರಿಷತ್ ಸದಸ್ಯ , ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಬುಧವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರ ನೇತೃತ್ವದಲ್ಲಿ ಆದಿವಾಸಿ ಸಮನ್ವಯ ಸಮಿತಿಯ ಮುಖಂಡರು ಭೇಟಿಯಾಗಿ ಮನವಿ ಸಲ್ಲಿಸಿದರು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ನೀಡಲಾದ ಮನವಿಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮಲೆಕುಡಿಯ ಸಮುದಾಯ ವಾಸಿಸುವ ಪ್ರದೇಶಗಳಲ್ಲಿ ರಸ್ತೆ , ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು , ಜನವಿರೋಧಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು , ವಿವಿಧ ಯೋಜನೆಗಳ ಹೆಸರಿನಲ್ಲಿ ಆದಿವಾಸಿ ಸಮುದಾಯಕ್ಕೆ ಮೂಲಭೂತ ಸೌಕರ್ಯಗಳನ್ನು ನಿರಾಕರಿಸಬಾರದು ಮತ್ತು ಒಕ್ಕಲೆಬ್ಬಿಸಬಾರದು , ಮಲೆಕುಡಿಯ , ಕೊರಗ ಸೇರಿದಂತೆ ಮರಾಠಿ ನಾಯ್ಕ ಸಮುದಾಯಕ್ಕೂ ಪೌಷ್ಟಿಕ ಆಹಾರ ಒದಗಿಸಬೇಕು , ತಾಲೂಕಿನ ಆದಿವಾಸಿ ಗುಡಿಸಲುಗಳ ಸರ್ವೆ ಕಾರ್ಯ ನಡೆಸಬೇಕು ಮತ್ತು ಸುಸಜ್ಜಿತ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು , ಸರ್ಕಾರಿ , ಅರಣ್ಯ ಪರಂಬೋಕು ಜಮೀನಿನಲ್ಲಿ ಹತ್ತಾರು ವರ್ಷಗಳಿಂದ ಕೃಷಿ ಕೃತಾವಳಿಗಳೊಂದಿಗೆ ವಾಸಿಸುವ ಆದಿವಾಸಿಗಳ ಜಮೀನನ್ನು ಅಕ್ರಮ ಸಕ್ರಮ ಯೋಜನೆಯಡಿ ಮಂಜೂರುಗೊಳಿಸಬೇಕು , ಬಾಂಜಾರು ಮಲೆಕುಡಿಯ ಕಾಲೋನಿಗೆ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಬೇಕು , ವಾಲ್ಮೀಕಿ ಆಶ್ರಮ ವಸತಿಶಾಲೆಗಳ ಅಧ್ಯಾಪಕ, ಇತರೆ ಸಿಬ್ಬಂದಿಗಳನ್ನು ಖಾಯಂ ಗೊಳಿಸಬೇಕು , ಕಾಡುತ್ಪತ್ತಿ ಸಂಗ್ರಹಿಸಲು ಆದಿವಾಸಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಸೇರಿದಂತೆ ಹಲವು ಗಂಭೀರ ಸ್ವರೂಪದ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ರಾಜ್ಯ ಸರ್ಕಾರ ಮಂಗಳೂರಿನಲ್ಲಿ ನಡೆಸುವ ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ , ಸಂಚಾಲಕ ಶೇಖರ್ ಲಾಯಿಲ ಮುಖಂಡರಾದ ಸುಧಾಕರ ಕುತ್ಲೂರು , ಪ್ರಶಾಂತ್ ಕುತ್ಲೂರು , ಸಂತೋಷ್ ಕಲ್ಲಂಡ ನಾವರ , ವಸಂತ ಹಿತ್ತಿಲಪೇಲ , ನಾಗೇಶ್ ಸವಣಾಲು , ಶೇಖರ ಕಂಬುಜೆ ನಡ , ಲೋಕೇಶ್ ಕುದ್ಕೊಲಿ ನಡ , ವಸಂತ ಕಂಬುಜೆ ನಡ , ನವೀನ್ ಪುಲಿತ್ತಡಿ ನಾವೂರು, ನಿರಂಜನ್ ಆಯಿಲ ಉಪಸ್ಥಿತರಿದ್ದರು.










