ಬೆಳ್ತಂಗಡಿ: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆಯು ಕುಟುಂಬದ ಯಜಮಾನಿಯರ ಸ್ವಾವಲಂಬಿ ಜೀವನಕ್ಕೆ ನೆರವಾಗುತ್ತಿದೆ. ಬೆಳ್ತಂಗಡಿ ತಾಲೂಕಿನ 56,347 ಗೃಹಲಕ್ಷ್ಮೀಯರ ಖಾತೆಗಳಿಗೆ ಇದುವರೆಗೆ ಒಟ್ಟು ರೂ.340.31 ಕೋಟಿ ಹಣ ಜಮೆಯಾಗಿದೆ ಎಂದು ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಿ. ಪದ್ಮನಾಭ ಸಾಲ್ಯಾನ್ ತಿಳಿಸಿದ್ದಾರೆ.
ಕುಟುಂಬದ ಯಜಮಾನಿಯರ ಖಾತೆಗೆ ಪ್ರತೀ ತಿಂಗಳು ಜಮೆಯಾಗುವ ರೂ.2000 ಆರ್ಥಿಕವಾಗಿ ಮಹಿಳೆಯರಿಗೆ ಬಲ ನೀಡುವುದರೊಂದಿಗೆ ಸ್ವಾವಲಂಬಿ ಜೀವನಕ್ಕೆ ಮೈಲಿಗಲ್ಲಾಗಿದೆ. ಯೋಜನೆಯ ಸೌಲಭ್ಯವು ಅರ್ಹ ಫಲಾನುಭವಿಗಳಿಗೆ ನಿರಂತರವಾಗಿ ತಲುಪುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ವಾರದಿಂದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಅಭಿಯಾನ ಆರಂಭವಾಗಲಿದ್ದು, ಬಯೋಮೆಟ್ರಿಕ್ ಹಾಗೂ ಮುಖಚಹರೆ ಆಧಾರಿತ ನವೀಕರಣ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಗೃಹಲಕ್ಷ್ಮೀಯರ ಪ್ರತಿ ಮನೆಗೂ ಗ್ಯಾರಂಟಿ ಸಮಿತಿ ಸದಸ್ಯರು ಭೇಟಿ ನೀಡಿ, ಅಗತ್ಯ ಮಾಹಿತಿ ಪಡೆದು ನೊಂದಾಯಿಸುವ ಕಾರ್ಯ ನಡೆಸಲಿದ್ದಾರೆ ಎಂದು ಪದ್ಮನಾಭ ಸಾಲ್ಯಾನ್ ಮಾಹಿತಿ ನೀಡಿದ್ದಾರೆ.









