ಬೆಳ್ತಂಗಡಿ: ಇಂದಬೆಟ್ಟು ಬೊಳೂರು ಬೈಲ್ ನಲ್ಲಿ ನೇತ್ರಾವತಿ ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟಕ್ಕೆ ಸಿದ್ಧಪಡಿಸುತ್ತಿದ್ದ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಓರ್ವನನ್ನು ಬಂಧಿಸಿ, ಎರಡು ಟಿಪ್ಪರ್ ಲಾರಿಗಳನ್ನು ಹಾಗೂ ಮರಳನ್ನು ವಶಕ್ಕೆ ಪಡೆದಿದ್ದಾರೆ.
ಆ.18ರಂದು ಬೆಳಗಿನ ಜಾವ ಸುಮಾರು 4.45ರ ವೇಳೆಗೆ ಇಂದಬೆಟ್ಟು ಗ್ರಾಮದ ನೇತ್ರಾವತಿ ನಗರ, ಬೊಳ್ಳೂರುಬೈಲು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ನೇತ್ರಾವತಿ ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟಕ್ಕಾಗಿ ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಾಳಿನಡೆಸಿದ್ದರು.
ಸ್ಥಳದಲ್ಲಿ ಸುಮಾರು ಆರು ಮಂದಿ ಪ್ಲಾಸ್ಟಿಕ್ ಬುಟ್ಟಿಗಳ ಮೂಲಕ ಮರಳನ್ನು ಟಿಪ್ಪರ್ಗೆ ತುಂಬಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರನ್ನು ಕಂಡು ಕೆಲವರು ಸ್ಥಳದಿಂದ ಪರಾರಿಯಾಗಿದ್ದು, ಸಿಬ್ಬಂದಿ ಬೆನ್ನಟ್ಟಿ ಮಹಮ್ಮದ್ ಸುಹೈಲ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಇತರರು ಪರಾರಿಯಾಗಿದ್ದಾರೆ.
ವಿಚಾರಣೆ ವೇಳೆ ಪರಾರಿಯಾದ ಟಿಪ್ಪರ್ ಚಾಲಕನ ಹೆಸರು ಇಬ್ರಾಹಿಂ ಹಾಗೂ ಮರಳು ತುಂಬಿಸುತ್ತಿದ್ದವರಲ್ಲಿ ಪುನೀತ್ ಎಂಬಾತನ ಹೆಸರನ್ನು ಆತ ತಿಳಿಸಿದ್ದಾನೆ ಹಾಗೂ ಮರಳು ಸಂಗ್ರಹಿಸಿ ಸಾಗಾಟ ಮಾಡಲು ಯಾವುದೇ ಸರ್ಕಾರಿ ಪರವಾನಗಿ ಹೊಂದಿಲ್ಲವೆಂದು ಆರೋಪಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿ ಪರಿಶೀಲಿಸಿದಾಗ KA-19-AA-2826 ನೋಂದಣಿ ಸಂಖ್ಯೆಯ ಟಿಪ್ಪರ್ನಲ್ಲಿ ಸುಮಾರು ₹10,000 ಮೌಲ್ಯದ ಮರಳು ಪತ್ತೆಯಾಗಿದ್ದು, ಟಿಪ್ಪರ್ನ ಅಂದಾಜು ಮೌಲ್ಯ ₹3.50 ಲಕ್ಷ ಎಂದು ಅಂದಾಜಿಸಲಾಗಿದೆ, ಮತ್ತೊಂದು KA-18-B-1236 ಟಿಪ್ಪರ್ನಲ್ಲಿ ಸುಮಾರು 20 ಪ್ಲಾಸ್ಟಿಕ್ ಬುಟ್ಟಿಯಷ್ಟು, ಅಂದಾಜು ₹400 ಮೌಲ್ಯದ ಮರಳು ಪತ್ತೆಯಾಗಿದ್ದು, ಟಿಪ್ಪರ್ನ ಅಂದಾಜು ಮೌಲ್ಯ ₹4 ಲಕ್ಷ ಎಂದು ಅಂದಾಜಿಸಲಾಗಿದ್ದು ಎರಡು ಟಿಪ್ಪರ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 89/2026ರಂತೆ BNS-2023ರ ಕಲಂ 303(2) ಜೊತೆಗೆ 3(5), MMDR Act ಹಾಗೂ KMMCR-1994ರ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.










