Home ಸ್ಥಳೀಯ ಸಮಾಚಾರ ತುಳುನಾಡು ಕೋಳಿ ಸಾಕಾಣಿಕೆ ರೈತರ ಸಂಕಷ್ಟಕ್ಕೆ ಸ್ಪಂದಿಸಿ: ಶಾಸಕ ಹರೀಶ್ ಪೂಂಜಾರವರನ್ನು ಭೇಟಿಯಾದ ‘ತುಳುನಾಡು ಕೋಳಿ...

ತುಳುನಾಡು ಕೋಳಿ ಸಾಕಾಣಿಕೆ ರೈತರ ಸಂಕಷ್ಟಕ್ಕೆ ಸ್ಪಂದಿಸಿ: ಶಾಸಕ ಹರೀಶ್ ಪೂಂಜಾರವರನ್ನು ಭೇಟಿಯಾದ ‘ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ’

0

ಬೆಳ್ತಂಗಡಿ; ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಳಿ ಸಾಕಾಣಿಕೆ ವಲಯವು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟ ಹಾಗೂ ರೈತರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ‘ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ (ರಿ.)’ ನಿಯೋಗವು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ಕರಾವಳಿ ಭಾಗದಲ್ಲಿ ಸಾವಿರಾರು ಕುಟುಂಬಗಳ ಜೀವನೋಪಾಯವಾಗಿರುವ ಕೋಳಿ ಸಾಕಾಣಿಕೆ ಉದ್ಯಮವು ಪ್ರಸ್ತುತ ಉತ್ಪಾದನಾ ವೆಚ್ಚದ ಏರಿಕೆ, ಮಾರುಕಟ್ಟೆ ಅಸ್ಥಿರತೆ, ಪ್ರಕೃತಿ ವಿಕೋಪ ಮತ್ತು ನೊಣದ ಹಾವಳಿಯಿಂದ ತೀವ್ರ ಹಾನಿಗೀಡಾಗಿದೆ. ಈ ವಲಯವನ್ನು ಉಳಿಸಿಕೊಳ್ಳಲು ತುರ್ತು ಕ್ರಮಗಳ ಅಗತ್ಯವಿದೆ ಎಂದು ಒಕ್ಕೂಟದ ಪದಾಧಿಕಾರಿಗಳು ಶಾಸಕರ ಗಮನಕ್ಕೆ ತಂದರು.

ಮನವಿಯ ಪ್ರಮುಖ ಬೇಡಿಕೆಗಳು:

  • ಕರಾವಳಿ ಭಾಗದಲ್ಲಿನ ನೊಣದ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಮತ್ತು ತ್ಯಾಜ್ಯ ನಿರ್ವಹಣಾ ಯೋಜನೆ ಜಾರಿ.
  • ಪ್ರತಿ 1 ಕೆ.ಜಿ.ಗೆ 10 ರೂಪಾಯಿಗಳ ಕನಿಷ್ಠ ಸಾಕಾಣಿಕಾ ವೆಚ್ಚದ (Growing charges) ಆದೇಶದ ಕಟ್ಟುನಿಟ್ಟಿನ ಅನುಷ್ಠಾನ.
  • ಪ್ರಕೃತಿ ವಿಕೋಪದಿಂದ ಉಂಟಾಗುವ ನಷ್ಟಗಳಿಗೆ ಸರ್ಕಾರಿ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವುದು.
  • ಕೋಳಿ ಫೀಡ್‌ನ ಗುಣಮಟ್ಟ ನಿಯಂತ್ರಣ ಮತ್ತು ಕಂಪೆನಿಗಳಿಂದ ರೈತರಿಗೆ ವಾರ್ಷಿಕ ಬೋನಸ್ ವ್ಯವಸ್ಥೆ.
  • ‘ಕರ್ನಾಟಕ ಕುಕ್ಕಟ ಅಭಿವೃದ್ಧಿ ನಿಯಂತ್ರಣ ಮಸೂದೆ 2023’ ರ ಅಂಗೀಕಾರ ಹಾಗೂ ಕೋಳಿ ಸಾಕಾಣಿಕೆಯನ್ನು ‘ಕೃಷಿ ಚಟುವಟಿಕೆ’ ಎಂದು ಪರಿಗಣಿಸುವ ಕಾನೂನು ತಿದ್ದುಪಡಿ.
  • ಕೋಳಿ ಶೆಡ್‌ಗಳಿಗೆ ರಿಯಾಯಿತಿ ದರದ ವಿದ್ಯುತ್ ಪೂರೈಕೆ ಹಾಗೂ ರೇಷ್ಮೆ ಇಲಾಖೆಯ ಮಾದರಿಯಲ್ಲಿ ಸಹಾಯಧನ ಮತ್ತು ಸೌಲಭ್ಯಗಳ ಒದಗಿಸುವಿಕೆ.
  • ಸುಲಭ ಬಡ್ಡಿ ದರದ ಸಾಲ ಸೌಲಭ್ಯ, ಆಧುನಿಕ ಉಪಕರಣಗಳ ಖರೀದಿಗೆ 90% ಸಹಾಯಧನ ಮತ್ತು ಸಮಗ್ರ ವಿಮಾ ಯೋಜನೆ ಜಾರಿ.

ಶಾಸಕ ಹರೀಶ್ ಪೂಂಜಾರವರು ಮನವಿಯನ್ನು ಸ್ವೀಕರಿಸಿ, ಕೋಳಿ ಸಾಕಾಣಿಕೆ ರೈತರ ಕಷ್ಟಗಳಿಗೆ ಸ್ಪಂದಿಸುವ ಭರವಸೆ ನೀಡಿದರು. ಈ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು, ರೈತರ ಹಿತದೃಷ್ಟಿಯಿಂದ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಅವರು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version