
ಬೆಳ್ತಂಗಡಿ : ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಪಟ್ರಮೆಯಲ್ಲಿ ಜು.10 ರಂದು ಸಂಜೆ ಸುಮಾರು 7:30 ಗಂಟೆಗೆ ಪಟ್ರಮೆ ನಿವಾಸಿ ಬಾಲಕೃಷ್ಣ ಎಂಬವರು ಪರಿಚಯದ ದಿನೇಶ್ ಅವರ ಆಟೋ ರಿಕ್ಷಾದಲ್ಲಿ ಕೊಕ್ಕಡ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ದಿನೇಶ್ ಅವರು ರಾಘವ ಎಂಬವರ ಅಂಗಡಿಯ ಬಳಿ ಆಟೋ ನಿಲ್ಲಿಸಿ ಅಂಗಡಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ರಾಘವ ಮತ್ತು ದಿನೇಶ್ ಅವರ ನಡುವೆ ಕೋಳಿ ಮಾಂಸದ ವಿಚಾರವಾಗಿ ಮಾತಿನ ಚಕಮಕಿ ನಡೆಯುತ್ತಿತ್ತು. ಆಟೋದಲ್ಲಿದ್ದ ಬಾಲಕೃಷ್ಣ ಅವರು ಆ ಕಡೆಗೆ ಇಣುಕಿ ನೋಡಿದ ವಿಚಾರಕ್ಕೆ, ಈ ಹಿಂದೆ ವೈಯಕ್ತಿಕ ಕಾರಣದಿಂದ ದ್ವೇಷ ಹೊಂದಿದ್ದ ಅಂಗಡಿಯ ಮಾಲೀಕ ರಾಘವರ ಮಗ ಜಗದೀಶ ಎಂಬಾತನು ಬಾಲಕೃಷ್ಣ ರವರ ಬಳಿಗೆ ಬಂದು, “ನೀನು ಯಾಕೆ ಇಲ್ಲಿಗೆ ಬಂದಿದ್ದು?” ಎಂದು ಪ್ರಶ್ನಿಸಿ, ಜಾತಿ ನಿಂದನೆ ಮಾಡಿ ಏಕಾಏಕಿ ಕೈಯಿಂದ ಕೆನ್ನೆಗೆ ಹೊಡೆದು, ಬಳಿಕ ಮುಷ್ಟಿ ಬಿಗಿದು ಮೂಗಿಗೆ ಗುದ್ದಿ ಹಲ್ಲೆ ನಡೆಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.11 ರಂದು ಹಲ್ಲೆಗೊಳಗಾದ ಬಾಲಕೃಷ್ಣ ರವರು ನೀಡಿದ ದೂರಿನ ಮೇರೆಗೆ ಕಲಂ 115(2), BNS-2023 -3(2)(va) SC&ST -2015 ರ ಅಡಿಯಲ್ಲಿ ಆರೋಪಿ ಜಗದೀಶ್ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.