Home ಅಪಘಾತ ವೇಣೂರು;ದ್ವಿಚಕ್ರ ವಾಹನಕ್ಕೆ ಗೂಡ್ಸ್ ರಿಕ್ಷಾ ಡಿಕ್ಕಿ; ಓರ್ವ ಸಾವು, ಮತ್ತೋರ್ವ ಗಂಭೀರ

ವೇಣೂರು;ದ್ವಿಚಕ್ರ ವಾಹನಕ್ಕೆ ಗೂಡ್ಸ್ ರಿಕ್ಷಾ ಡಿಕ್ಕಿ; ಓರ್ವ ಸಾವು, ಮತ್ತೋರ್ವ ಗಂಭೀರ

8
0

ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ಗೂಡ್ಸ್ ರಿಕ್ಷಾ ಡಿಕ್ಕಿಯೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿ ನಿಟ್ಟಡೆ ಬಳಿ ಜು. 5ರ ರಾತ್ರಿ ನಡೆದಿದೆ.
ವೇಣೂರು ಗ್ರಾ.ಪಂ. ವ್ಯಾಪ್ತಿಯ ಕರಿಮಣೇಲು ಗ್ರಾಮದ ಗಾಂಧಿನಗರ ತಿಮರಡ್ಡ ಮನೆ ನಿವಾಸಿ ರವೀಂದ್ರ ಮೂಲ್ಯ (೪೭) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಅವರ ಸಹೋದರ ಜಗದೀಶ್ ಮೂಲ್ಯ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾರೆ ಕೆಲಸ ಮಾಡಿಕೊಂಡಿದ್ದ ಸಹೋದರರು ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಗುರುವಾಯನಕೆರೆಯಿಂದ ವೇಣೂರು ಕಡೆಗೆ ಬರುತ್ತಿದ್ದ ವೇಳೆ ವೇಣೂರಿನಿಂದ ಹೋಗುತ್ತಿದ್ದ ಗೂಡ್ಸ್ ರಿಕ್ಷಾ ನಿಟ್ಟಡೆಯ ಕುಂಭಶ್ರೀ ಶಾಲಾ ಬಳಿ ಮುಖಾಮುಖಿ ಡಿಕ್ಕಿಯೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಪಲ್ಟಿಯಾಗಿದ್ದು, ರವೀಂದ್ರ ಮೂಲ್ಯ ಅವರ ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರೆ ಜಗದೀಶ್ ಮೂಲ್ಯ ಅವರಿಗೆ ಕಾಲುಗಳಿಗೆ ಬಲವಾದ ಗಾಯಗಳಾಗಿವೆ. ರಿಕ್ಷಾ ಚಾಲಕ ಹಾಗೂ ಸ್ಥಳೀಯರು ಸೇರಿ ಗಾಯಾಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ಮಾಡಿದ್ದಾರೆ.
ಗೂಡ್ಸ್ ರಿಕ್ಷಾ ನಿಟ್ಟಡೆಯಲ್ಲಿ ಹೆದ್ದಾರಿಯಲ್ಲಿದ್ದ ಸಣ್ಣ ಗುಂಡಿಯೊಂದನ್ನು ತಪ್ಪಿಸುವ ಭರದಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದೇ ದುರ್ಘಟನೆ ಕಾರಣವೆನ್ನಲಾಗಿದೆ. ಮಳೆಯೂ ಇದ್ದುದರಿಂದ ಇದು ದ್ವಿಚಕ್ರ ಸವಾರರ ಗಮನಕ್ಕೆ ಬಾರದೇ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೃತ ರವೀಂದ್ರ ಅವರು ತಾಯಿ ಬಾಗಿ, ಪತ್ನಿ ಭವಾನಿ, ಪುತ್ರ ಸ್ವಸ್ತಿಕ್, ಸಹೋದರರು, ಸಹೋದರಿ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಘಟನೆಯಿಂದ ಇಡೀ ಕುಟುಂಬ ಕಣ್ಣೀರಿಡುತ್ತಿದೆ.

LEAVE A REPLY

Please enter your comment!
Please enter your name here