Home ಅಪರಾಧ ಲೋಕ ಬಂಟ್ವಾಳ: ಚಿಕ್ಕಪ್ಪನನ್ನೇ ಕೊಂದ ಪ್ರಕರಣ ಆರೋಪಿ ರಾಹುಲ್ ಪೊಲೀಸ್ ವಶಕ್ಕೆ

ಬಂಟ್ವಾಳ: ಚಿಕ್ಕಪ್ಪನನ್ನೇ ಕೊಂದ ಪ್ರಕರಣ ಆರೋಪಿ ರಾಹುಲ್ ಪೊಲೀಸ್ ವಶಕ್ಕೆ

0

ಬಂಟ್ವಾಳ: ಪಿಲಾತಬೆಟ್ಟು ಎಂಬಲ್ಲಿ ತನ್ನ ಚಿಕ್ಕಪ್ಪನನ್ನೇ ಬಿಯರ್ ಬಾಟ್ಲಿಯಿಂದ ಹೊಡೆದು ಕೊಂದ ಪ್ರಕರಣದ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಲಾತಬೆಟ್ಟು ನಿವಾಸಿ ಕೇಶವ ಎಂಬವರ ಪುತ್ರ ರಾಹುಲ್( 19) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.ಈ ಬಗ್ಗೆ ಪಿಲಾತಬೆಟ್ಟು ನಿವಾಸಿ ಶೇಖರ ಎಂಬವರು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ವಿವರ: ದಿನಾಂಕ: 31.05.2026 ರಂದು ಪಿಲಾತಬೆಟ್ಟು ನಿವಾಸಿ ಶೇಖರ ಅವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮವಿತ್ತು. ಕಾರ್ಯಕ್ರಮಕ್ಕೆ ಕುಟುಂಬದ ಸದಸ್ಯರುಗಳು ಬಂದಿದ್ದರು. ಈ ವೇಳೆ ಶೇಖರ ಅವರ ಸಹೋದರ ಮಧುಸೂದನ್ ಎಂಬವರು ಶೇಖರ ಅವರ ಮತ್ತೋರ್ವ ಸಹೋದರ ಕೇಶವ ಎಂಬವರ ಮಗ ರಾಹುಲ್ ಎಂಬಾತನಿಗೆ, ಕೆಲಸದ ವಿಚಾರದಲ್ಲಿ ತಕರಾರು ತೆಗೆದಿದ್ದಾರೆ. ಇದರಿಂದ ಆರೋಪಿ ರಾಹುಲ್ ಕೋಪಗೊಂಡು ಅಲ್ಲಿಂದ ತೆರಳಿದ್ದ. ಕಾರ್ಯಕ್ರಮ ಮುಗಿದ ಬಳಿಕ ಶೇಖರ್ ಅವರು ಮನೆಯಲ್ಲಿದ್ದಾಗ ಮನೆಯ ಸಮೀಪ ಬೊಬ್ಬೆ ಕೇಳಿದ್ದು, ಶೇಖರ್ ಅವರು ಅಲ್ಲಿಗೆ ತೆರಳಿದಾಗ ಆರೋಪಿ ರಾಹುಲ್ ಬಿಯರ್ ಬಾಟಲಿಯಿಂದ ಮಧುಸೂದನರವರ ಕುತ್ತಿಗೆಗೆ ತಿವಿದಿರುವುದಾಗಿ ಗೊತ್ತಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಧುಸೂದನ‌ (37) ರವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕೊಂಡು ಹೋಗಿ ವೈದ್ಯರಲ್ಲಿ ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂದು ಪುಂಜಾಲಕಟ್ಟೆ ಪೊಲೀಸ್‌ ಠಾಣೆಗೆ ಶೇಖರ್ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅದರಂತೆ ಪ್ರಕರಣ ದಾಖಲಿಸಿಕೊಂಡ ಪುಂಜಾಲಕಟ್ಟೆ ಪೊಲೀಸರು ಆರೋಪಿ ರಾಹುಲ್ ನನ್ನು ಜೂನ್ 1 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version