ಬೆಳ್ತಂಗಡಿ : ಯಾವುದೇ ಅನುಮತಿ ಪಡೆಯದೆ ಮನೆಯ ಶೆಡ್ ನಲ್ಲಿ ದಾಸ್ತಾನು ಮಾಡಿದ್ದ 4,175 ಲೀಟರ್ ಡಿಸೇಲ್ ವಶಪಡಿಸಿಕೊಂಡಿದ್ದ ಪ್ರಕರಣ ಸಂಬಂಧ ಸರಕಾರದ ನಿಯಮದಂತೆ ಕಂದಾಯ ಇಲಾಖೆ ಮುಂದಾಳತ್ವದಲ್ಲಿ ಹರಾಜು ಪ್ರಕ್ರಿಯೆ ಮಾಡಲಾಗಿದೆ.
ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುದೆಲ್ತಿಯಾರ್ ಮನೆಯ ಅಂಗಳದಲ್ಲಿ ಡಿಸೇಲ್ ನ್ನು ಮಾ.27 ರಂದು ಒಟ್ಟು 7 ಮಂದಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು ಇದರಲ್ಲಿ ಪುತ್ತೂರು ತಾಲೂಕಿನ ಹಿರೆಬಂಡಾಡಿ ನಿವಾಸಿ ನಾರಾಯಣ ಗೌಡ ಎಂಬವರು ಪ್ರತಿ ಲೀಟರ್ ಗೆ 60 ರೂಪಾಯಿಂತೆ ಒಟ್ಟು 4,175 ಲೀಟರ್ ಡಿಸೇಲ್ 2,35,800 ರೂಪಾಯಿಗೆ ಹರಾಜಿನಲ್ಲಿ ಪಡೆದುಕೊಂಡಿದ್ದಾರೆ.
ಪ್ರಕರಣದ ವಿವರ: ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಸಿ ಸಿ.ಕೆ ಮತ್ತು ಸಿಬ್ಬಂದಿ ಪ್ರವೀಣ್ ಮುರುಗೋಳಿ ಚಾಲಕ ಪ್ರವೀಣ್ ಮಾ.9 ರಂದು ಮದ್ಯ ರಾತ್ರಿ ರೌಡ್ಸ್ ನಲ್ಲಿರುವಾಗ ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುದೆಲ್ತಿಯಾರ್ ಎಂಬಲ್ಲಿನ ಬನಶಂಕರಿ ನಿಲಯದ ದಿ.ಮುತ್ತಪ್ಪ ಗೌಡರ ಮಗ ಜಗದೀಶ್(35) ಎಂಬುವವರ ಮನೆಯ ಹಿಂಭಾಗದ ಶೆಡ್ ಮೇಲೆ 1 ಗಂಟೆ ಸುಮಾರಿಗೆ ದಾಳಿ ನಡೆಸಿದಾಗ ಅಕ್ರಮವಾಗಿ 20 ಬ್ಯಾರಲ್ ನಲ್ಲಿ 200 ಲೀಟರ್ ನಂತೆ ಒಟ್ಟು 4,000 ಲೀಟರ್, 5 ಬ್ಯಾರಲ್ ಕ್ಯಾನ್ ನಲ್ಲಿ 35 ಲೀಟರ್ ನಂತೆ ಒಟ್ಟು 175 ಲೀಟರ್ ಸೇರಿ ಒಟ್ಟು ಶೇಖರಿಸಿಟ್ಟಿದ್ದ 4,175 ಲೀಟರ್ ಡೀಸೆಲ್ ಹಾಗೂ 5 ಖಾಲಿ ಕ್ಯಾನ್ ಗಳನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 3 ಲಕ್ಷದ 50 ಸಾವಿರ ರೂಪಾಯಿ ಅಗಿರುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಜಗದೀಶ್ ಮತ್ತು ಹರೀಶ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮಾ.10 ರಂದು ಡಿವೈಎಸ್ಪಿ ರೋಹಿನಿ.ಸಿ.ಕೆ ನೀಡಿದ ದೂರಿನ ಮೇರೆಗೆ ಕಲಂ 287 BNS, 3,7 ಇಸಿ ಅಕ್ಟ್, ಪೆಟ್ರೋಲಿಯಂ 23 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಹರಾಜು ಪ್ರಕ್ರಿಯೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಬೆಳ್ತಂಗಡಿ ಆಹಾರ ಇಲಾಖೆಯ ಆಹಾರ ಶಿರಸ್ತೇದಾರ ಸಂತೋಷ್ ಜಿ ಮತ್ತು ಆಹಾರ ನಿರೀಕ್ಷಕ ವಿಶ್ವ.ಕೆ , ಆಹಾರ ಇಲಾಖೆಯ ಸಿಬ್ಬಂದಿ ಹರೀಶ್.ಕೆ ಉಪ್ಪಿನಂಗಡಿ ಸಬ್ ಇನ್ಸ್ಪೆಕ್ಟರ್ ಸುತೇಶ್ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.
