ಬೆಳ್ತಂಗಡಿ: ಕುವೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ 70 ಲಕ್ಷ ರೂ. ಗಳಷ್ಟು ಪರಿಹಾರ ಮೊತ್ತ ಪಡೆದ ಬಳಿಕವೂ ಕಟ್ಟಡವನ್ನು ಸ್ವಲ್ಪ ಮಾತ್ರ ಕೆಡವಿ ಅನಧಿಕೃತವಾಗಿ ಮರುನಿರ್ಮಾಣ ಮಾಡುತ್ತಿರುವ ಬಗ್ಗೆ ವರದಿಯಾಗಿದೆ.ಈ ಬಗ್ಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಲಾಗಿದೆ.
ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುವೆಟ್ಟು ಗ್ರಾಮದ ಅಲಾದಿಕೊಟ್ಟಿಗೆ – ವಿದ್ಯಾನಗರ ಎಂಬಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಈ ಕಟ್ಟಡವನ್ನು ಈಗಾಗಲೇ ಹೆದ್ದಾರಿ ಇಲಾಖೆ ಭೂಸ್ವಾಧೀನಪಡಿಸಿಕೊಂಡು 70 ಲಕ್ಷ ರೂ. ಪರಿಹಾರ ಮೊತ್ತ ನೀಡಿದರೂ ಕಟ್ಟಡದ ಪಾರ್ಶ್ವವನ್ನು ಮಾತ್ರ ತೆರವುಗೊಳಿಸಿದ ಮಾಲಿಕರು ಇದೀಗ ಹೆದ್ದಾರಿಯ ಅಂಚಿನವರೆಗೂ ಅಕ್ರಮ ಕಟ್ಟಡ ನಿರ್ಮಾಣಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೆದ್ದಾರಿ ಕಾಮಗಾರಿಯ ಪರಿಹಾರದ ಹಣವೂ ಇವರಿಗೆ ಈಗಾಗಲೇ ದೊರಕಿದೆ. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ (ಒಂದು ಅಡಿ ಕೂಡಾ ಅಂತರವಿಡದೇ) ನೂತನ ಕಟ್ಟಡವೊಂದನ್ನು ನಿರ್ಮಿಸುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ದೂರು ನೀಡಿದ್ದಾರೆ.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ಅಗತ್ಯ ಇಲಾಖೆಗಳನ್ನು ಕರೆಯಿಸಿ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ತಾಪಂ ಇಒ ಭವಾನಿ ಶಂಕರ್ ತಿಳಿಸಿದ್ದಾರೆ.




