
ಧರ್ಮಸ್ಥಳ: ಶಿವರಾತ್ರಿ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಶ್ರದ್ಧಾ-ಭಕ್ತಿಯೊಂದಿಗೆ ಪಾದ ಯಾತ್ರೆಯಲ್ಲಿ ಬಂದ ಸಹಸ್ರಾರು ಭಕ್ತರು ತಮ್ಮಲ್ಲಿರುವ ದೋಷಗಳನ್ನೆಲ್ಲ ಇಲ್ಲೆ ತ್ಯಜಿಸಿ, ಉತ್ತಮ ಆಚಾರ-ವಿಚಾರಗಳೊಂದಿಗೆ ಸಭ್ಯ ನಾಗರಿಕರಾಗಿ ಸಂಸ್ಕಾರಯುತ ಸಾರ್ಥಕ ಜೀವನ ನಡೆಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶನಿವಾರ ಬೆಂಗಳೂರಿನ ಗುರು ಹನುಮಂತಪ್ಪ ಸ್ವಾಮೀಜಿ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಬಂದ ಪಾದಯಾತ್ರಿಗಳನ್ನು ಪ್ರವಚನ ಮಂಟಪದಲ್ಲಿ ಅಭಿನಂದಿಸಿ ಮಾತನಾಡಿದರು.
ವಿಷಕಂಠನಾದ ಶ್ರೀ ಮಂಜುನಾಥಸ್ವಾಮಿಗೆ ಎಲ್ಲಾ ದೋಷಗಳನ್ನು ಸ್ವೀಕರಿಸಿ ಲೋಕಕಲ್ಯಾಣ ಮಾಡುವ ಶಕ್ತಿ ಇದೆ. ಆದುದರಿಂದಲೇ ಅಪಘಾತದಲ್ಲಿ ಹಾಗೂ ಅಪಮೃತ್ಯುವಿನಲ್ಲಿ ಸತ್ತವರ ಮೋಕ್ಷಪ್ರಾಪ್ತಿಗಾಗಿ ಭಕ್ತರು ಧರ್ಮಸ್ಥಳಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ ಎಂದರು.
ಶ್ರದ್ಧಾ-ಭಕ್ತಿಯಂದಿಗೆ ನಿಸ್ವಾರ್ಥವಾಗಿ ಪಾದಯಾತ್ರೆ ಮಾಡಿದಾಗ ಹೆಚ್ಚಿನ ಫಲ ಸಿಗುತ್ತದೆ. ಮಹಿಳೆಯರು ಕೂಡಾ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೆಗ್ಗಡೆಯವರು ಹೇಳಿದರು.
ಧರ್ಮಸ್ಥಳದ ಭಕ್ತರ ಸೇವೆ ಮಾಡಿದರೂ ಶ್ರೀ ಸ್ವಾಮಿಯ ಸೇವೆ ಮಾಡಿದಷ್ಟೆ ಪುಣ್ಯ ಸಂಚಯವಾಗುತ್ತದೆ ಎಂಬ ಭಾವನೆಯಿಂದ ದಾರಿಯುದ್ದಕ್ಕೂ ಸಹೃದಯ ಊರಿನ ನಾಗರಿಕರು ಹಾಗೂ ಸಾರ್ವಜನಿಕರು ಪಾದಯಾತ್ರಿಗಳಿಗೆ ಎಳನೀರು, ಉಚಿತ ಪಾನೀಯ, ಹಣ್ಣು-ಹಂಪಲು, ವಸತಿ, ಊಟದ ವ್ಯವಸ್ಥೆ ಮಾಡಿ ಸಹಕರಿಸಿದ್ದಾರೆ.
ಭಕ್ತರ ಸೇವೆಯೇ ಭಗವಂತನ ಸೇವೆ ಎಂಬ ಭಾವನೆಯಿಂದ ಇಂದು ಶಿವರಾತ್ರಿಯಂದು ಭಾನುವಾರ ಬೆಂಗಳೂರಿನ ಭಕ್ತರು ಅನ್ನಪೂರ್ಣದ ಹಿಂಭಾಗದ ಮೈದಾನದಲ್ಲಿ ಹಾಗೂ ಹೈಸ್ಕೂಲು ಕ್ರೀಡಾಂಗಣದಲ್ಲಿ ಎಲ್ಲರಿಗೂ ಅನ್ನದಾಸೋಹದ ಸೇವೆ ಮಾಡುತ್ತಿರುವುದಕ್ಕೆ ಹೆಗ್ಗಡೆಯವರು ವಿಶೇಷ ಅಭಿನಂದನೆ ಸಲ್ಲಿಸಿದರು.
ಪಾದಯಾತ್ರಿಗಳ ವತಿಯಿಂದ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಅವರನ್ನು ಗೌರವಿಸಿದರು.
ಧರ್ಮಸ್ಥಳದ ವತಿಯಿಂದ ಪಾದಯಾತ್ರೆಯ ರೂವಾರಿ ಗುರು ಹನುಮಂತಪ್ಪ ಸ್ವಾಮೀಜಿ ಮತ್ತು ಮರಿಯಪ್ಪ ಅವರನ್ನು ಹೆಗ್ಗಡೆಯವರು ಸನ್ಮಾನಿಸಿ ಅಭಿನಂದಿಸಿದರು.
ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಮತ್ತು ಮರಿಯಪ್ಪ ಉಪಸ್ಥಿತರಿದ್ದು ಸಮಾರಂಭದ ಯಶಸ್ವಿಗೆ ಸಹಕರಿಸಿದರು.