

ಬೆಳ್ತಂಗಡಿ; ನಗರದಲ್ಲಿ ನೂತನ ಬಸ್ ನಿಲ್ದಾಣದ ಕಾಮಗಾರಿ ಇದೀಗ ಪುನರಾರಂಭಗೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿ ಮರು ಜೀವ ಪಡೆದಿದೆ.
2023ರಲ್ಲಿ ಆರಂಭವಾಗಿರುವ ನೂತನ ಬಸ್ ನಿಲ್ದಾಣದ 12 ಕೋಟಿ ರೂ. ಅನುದಾನದ ಕಾಮಗಾರಿಯಲ್ಲಿ ಕಳೆದ ಬೇಸಿಗೆಯಲ್ಲಿ ನೆಲಮಟ್ಟದ ಕೆಲಸಗಳು ನಡೆದಿದ್ದು ಮಳೆ ಆರಂಭವಾಗುತ್ತಿದ್ದಂತೆ ಕಾಮಗಾರಿ ನಿಂತಿತ್ತು.
ಮಳೆಗಾಲದಲ್ಲಿ ಇಲ್ಲಿ ಮಣ್ಣು ಕುಸಿದು ಈಗಿರುವ ಬಸ್ ನಿಲ್ದಾಣಕ್ಕೆ ಕೆಸರು ನೀರು ಹರಿದು ಬರುತ್ತಿತ್ತು. ಕಾಮಗಾರಿಗೆ ತಂದು ಹಾಕಿದ್ದ ಕಬ್ಬಿಣ ತುಕ್ಕು ಹಿಡಿಯುತ್ತಿತ್ತು. ಪರಿಸರದಲ್ಲಿ ಗಲೀಜು ಇದ್ದು ಅಲ್ಲಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆ ಉತ್ಪತ್ತಿ ಕಾರಣವಾಗಿ ಮಾರ್ಪಟ್ಟಿತ್ತು. ಪ್ರತಿದಿನ ಸಾವಿರಾರು ಜನ, ನೂರಾರು ಬಸ್ ಓಡಾಟ ಇರುವ ಈ ಸ್ಥಳದಲ್ಲಿ ಸಾಂಕ್ರಾಮಿಕ ರೋಗ ಭೀತಿಯು ಎದುರಾಗಿತ್ತು.
ಈ ಬಗ್ಗೆ ವಿಸ್ತಾರವಾದ ವರದಿ ಪ್ರಕಟವಾಗಿತ್ತು.
ಇದರ ಬೆನ್ನಲ್ಲಿಯೇ ಶಾಸಕ ಹರೀಶ್ ಪೂಂಜ ಅವರು ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿಯನ್ನು ಆರಂಭಿಸುವಂತೆ ಸೂಚನೆ ನೀಡಿದ್ದರು. ಇದೀಗ ಕೊನೆಗೂ ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗಿದೆ.
ಚಾವಣಿಗೆ ಕಬ್ಬಿಣ ಹಾಕುವ ಸಹಿತ ಇನ್ನಿತರ ಕೆಲಸಗಳು ಪ್ರಗತಿಯಲ್ಲಿವೆ. ಮುಂದಿನ ಹಂತದಲ್ಲಿ ಹೆಚ್ಚಿನ ಕಾಮಗಾರಿಗಳು ತ್ವರಿತವಾಗಿ ನಡೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಅರಣ್ಯ ಇಲಾಖೆ ಜಾಗದ ಸಮಸ್ಯೆ
ಸುಮಾರು 1.20 ಎಕರೆ ಸ್ಥಳದಲ್ಲಿ ನಿರ್ಮಾಣವಾಗಲಿರುವ ಈ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಜಾಗವಿದ್ದು ವಲಯ ಅರಣ್ಯಾಧಿಕಾರಿ ಕಚೇರಿಯು ಕಾರ್ಯನಿರ್ವಹಿಸುತ್ತಿದೆ. ಅರಣ್ಯ ಇಲಾಖೆಯ ಜಾಗ ಹಸ್ತಾಂತರದ ಬಗ್ಗೆ ಸರಕಾರದ ಮಟ್ಟದಲ್ಲಿ ನಿರಣಯವಾಗಿರುವುದಾಗಿ ಶಾಸಕರು ಈ ಹಿಂದೆಯೇ ಹೇಳಿದ್ದರು.
ಅರಣ್ಯ ಇಲಾಖೆಗೆ ಬದಲಿ ಜಾಗ ಗುರುತಿಸಲು ಮುಂದಾಗಿತ್ತು . ಆದರೆ ಅರಣ್ಯ ಇಲಾಖೆ ಇದುವರೆಗೂ ಸಂಬಂಧಿತ ಜಾಗವನ್ನು ಬಿಟ್ಟು ಕೊಟ್ಟಿಲ್ಲ. ಈ ಕಾರಣ ಆ ಭಾಗದ ಕಾಮಗಾರಿ ಆರಂಭಿಸಲು ತೊಡಕಾಗಿದೆ ಈ ಬಗ್ಗೆ ಈಗಾಗಲೇ ಶಾಸಕರು, ಕೆಎಸ್ಸಾರ್ಟಿಸಿ ಅಧಿಕಾರಿಗಳು ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಿದ್ದಾರೆ ಆದರೆ ಅರಣ್ಯ ಇಲಾಖೆ ಇನ್ನೂ ಕೂಡ ಜಾಗ ಬಿಟ್ಟು ಕೊಟ್ಟಿಲ್ಲ.
ಅರಣ್ಯ ಇಲಾಖೆಯವರು ಈಬಗ್ಗೆ ಇನ್ನೂ ನಿಧಾನ ನೀತಿ ಅನುಸರಿಸುತ್ತಿದ್ದು ಕಾಮಗಾರಿಗೆ ತೊಡಕಾಗಿದೆ.
ಕಾಮಗಾರಿ ಆರಂಭಗೊಂಡಿದೆ ಇಂಜಿನಿಯರ್
“ಮಳೆ ಕಡಿಮೆಯಾಗಿದ್ದು ಕಾಮಗಾರಿ ಪುನರಾರಂಭಿಸಲಾಗಿದೆ. ಯಾವುದೇ ಗೊಂದಲಗಳಿಲ್ಲದೆ ಕಾಮಗಾರಿ ನಡೆಯುತ್ತಿದೆ. ಹೊಸ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರಯಾಣಿಕರಿಗೆ ಬೇಕಾದ ಅಗತ್ಯ ಸೇವೆಗಳನ್ನು ಕಲ್ಪಿಸುವ ಕೆಲಸಗಳನ್ನು ಪ್ರಥಮ ಆದ್ಯತೆ ಮೇರೆಗೆ ನಡೆಸಲಾಗುವುದು.” ಎಂದು ಕೆಎಸ್ಸಾರ್ಟಿಸಿ ಇಂಜಿನಿಯರಿಂಗ್ ವಿಭಾಗ ದ ಇಂಜಿನಿಯರ್ ಶರತ್ ಮಾಹಿತಿ ನೀಡಿದ್ದಾರೆ.









