ಬೆಳ್ತಂಗಡಿ;ಕುತ್ಲೂರಿನಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣದ ಆರೋಪಿ ಕುಖ್ಯಾತ ಕಳ್ಳನನ್ನು ವೇಣೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ನಾರವಿ ಗ್ರಾಮದ ಕುತ್ಲೂರಿನ ಮಂಜು ಶ್ರೀ ನಗರದ ಶಿಕ್ಷಕ ಅವಿನಾಶ್ ಮನೆಯಲ್ಲಿ ಅ.2 ರಿಂದ ಅ.6 ರ ನಡುವೆ ಮನೆಯಲ್ಲಿ ಯಾರು ಇಲ್ಲದ ವೇಳೆ 9.5 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು.ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈ ಬಗ್ಗೆ ತನಿಖೆ ನಡೆಸಿದ ತಂಡ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ಸಬ್ ಇನ್ಸ್ಪೆಕ್ಟರ್ ಓಮನ ಮತ್ತು ತಂಡ ನ.11 ರಂದು ರಾತ್ರಿ ವೇಣೂರು ಕುಂಭಶ್ರೀ ಬಳಿ ವಾಹನ ತಪಾಸಣೆ ಮಾಡುವ ವೇಳೆ ಅನುಮಾನಸ್ಪದವಾಗಿ ಸ್ಕೂಟರ್ ವಾಹನದಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿ ವಾಹನದ ದಾಖಲೆ ಮತ್ತು ವ್ಯಕ್ತಿಯನ್ನು ಪರಿಶೀಲನೆ ವೇಳೆ ಮಂಗಳೂರಲ್ಲಿ ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ.
ವೇಣೂರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದಾಗ ಈತನ ಮೇಲೆ ಸುಮಾರು 150 ಪ್ರಕರಣ ಹೊಂದಿ 45 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿರುವ ಕುಖ್ಯಾತ ಕಳ್ಳ ಮೂಲತಃ ಚಿಕ್ಕಮಗಳೂರು ಜಿಲ್ಲೆಯವನಾಗಿದ್ದು. ಈತ ಮಂಗಳೂರು ಸುರತ್ಕಲ್ ಕಾನದಲ್ಲಿ ವಾಸಿಸುತ್ತಿರುವ ಇತ್ತೆ ಬರ್ಪೆ ಅಬೂಬಕ್ಕರ್ (71) ಎಂದು ಬೆಳಕಿಗೆ ಬಂದಿದೆ. ಹೆಚ್ಚಿನ ವಿಚಾರಣೆ ಮಾಡಿದಾಗ ನಾರವಿಯ ಕುತ್ಲೂರಿನ ಅವಿನಾಶ್ ಮನೆಯಲ್ಲಿ ಕಳ್ಳತನ ಮಾಡಿರುವುದನ್ನು ಬಾಯಿಬಿಟ್ಟಿರುವುದಾಗಿ ತಿಳಿದು ಬಂದಿದೆ.
ವೇಣೂರು ಪೊಲೀಸರು ಆರೋಪಿಯನ್ನು ನ.12 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಆರೋಪಿ ಉಡುಪಿ ಜಿಲ್ಲೆಯ ಶಿರ್ವದಲ್ಲಿ ಕಳ್ಳತನ ಮಾಡಿ ಸಿಕ್ಕಿ ಬಿದ್ದು ಎರಡು ತಿಂಗಳು ಜೈಲು ಸೇರಿ ಇತ್ತಿಚೆಗೆ ಹೊರಬಂದಿದ್ದ ಎನ್ನಲಾಗಿದೆ.
ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ ನೇತೃತ್ವದಲ್ಲಿ ವೇಣೂರು ಸಬ್ ಇನ್ಸ್ಪೆಕ್ಟರ್ ಓಮನ ತಂಡದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
