ಬೆಳ್ತಂಗಡಿ:ಮೊಸಳೆ ದಾಳಿಯಿಂದ ಕಾರ್ಮಿಕರೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಮಂಗಳವಾರ ನಡೆದಿದೆ.
ಕಲ್ಮಂಜ ಗ್ರಾಮದ ಹುಣಿಪಾಜೆ ಸಮೀಪದ ನಿವಾಸಿ ಉಮೇಶ ಎಂಬವರು ಮುಂಡಾಜೆ ಗ್ರಾಮದ ಕಾಯರ್ತೋಡಿ ಸಮೀಪ ನೇತ್ರಾವತಿ ನದಿ ದಾಟಿ ನದಿಯ ಇನ್ನೊಂದು ಭಾಗದಲ್ಲಿರುವ ಪರಿಸರಕ್ಕೆ ಕೆಲಸಕ್ಕೆ ಬರುವ ವೇಳೆ ನದಿಯನ್ನು ದಾಟಲು ನೀರಿಗೆ ಇಳಿಯುತ್ತಿದ್ದಂತೆ ನದಿ ದಡದಲ್ಲಿದ್ದ ಮೊಸಳೆ ನೀರಿಗೆ ಹಾರಿದೆ. ನದಿ ದಡದ ಪೊದೆಗಳ ಮಧ್ಯೆ ಮೊಸಳೆ ಇದ್ದದ್ದು ಇವರ ಗಮನಕ್ಕೆ ಬಂದಿರಲಿಲ್ಲ.
ಇವರ ತೀರಾ ಸಮೀಪ ಮೊಸಳೆ ಹಾರಿದ್ದು, ಇದನ್ನು ಕಂಡ ಅವರು ತಕ್ಷಣ ನದಿಯಿಂದ ಮೇಲ್ಭಾಗಕ್ಕೆ ಹೋಗಿ ಮೊಸಳೆ ದಾಳಿಯಿಂದ ತಪ್ಪಿಸಿಕೊಂಡರು.
ಕಳೆದ ಕೆಲವು ದಿನಗಳಿಂದ ಮೊಸಳೆ ಈ ಪರಿಸರದಲ್ಲಿಯೇ ಓಡಾಟ ನಡೆಸುತ್ತಿದ್ದು ಆಗಾಗ ಅಲ್ಲಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸುತ್ತಿದೆ.









