
ಬೆಳ್ತಂಗಡಿ; ನಾರಾವಿ ಗ್ರಾಮಪಂಚಾಯತು ವ್ಯಾಪ್ತಿಯ ಕುತ್ಲೂರು ಗ್ರಾಮದ ಮಂಜುಶ್ರೀನಗರ ಶ್ರೀ ಅನಘ ಎಂಬಲ್ಲಿನ ನಿವಾಸಿ ಅವಿನಾಶ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಒಡೆದು ನುಗ್ಗಿದ ಕಳ್ಳರು 9.5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಘಟನೆ ನಡೆದಿದ್ದು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮನೆಯವರು ಅ2ರಂದು ಮನೆಗೆ ಬೀಗ ಹಾಕಿ ಹೋಗಿದ್ದು ಅ 6 ರಂದು ಬಂದು ನೋಡಿದಾಗ ಮನೆಯ ಬೀಗ ಒಡೆದಿದ್ದು ಕಳ್ಳತನವಾಗಿರುವುದು ಕಂಡು ಬಂದಿದೆ. ಮನೆಯೊಳಗೆ ಪ್ರವೇಶಿಸಿದ ಕಳ್ಳರು ಬೆಡ್ ರೂಮಿನ ಕಪಾಟಿನ ಬೀಗ ಒಡೆದು ಅದರೊಳಗೆ ಇಟ್ಟಿದ್ದ ಎರಡೆಳೆಯ ಚಿನ್ನದ ಕರಿಮಣಿ ಸರ ಮುತ್ತಿನ ಸರ, ಚಿನ್ನದ ಬ್ರಾಸ್ ಲೈಟ್, ಮಕ್ಕಳ ಎರಡು ಸರಗಳು, ಒಂದು ಉಂಗುರ, ಒಂದು ಬಡೋಲೆ, ಚಿನ್ನದ ಉಂಗುರಗಳು ಸೇರಿದಂತೆ ಸುಮಾರು 149 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದು ಅದರ ಮೌಲ್ಯ ಸುಮಾರು 9,50,000 ಎಂದು ಅಂದಾಜಿಸಲಾಗಿದೆ ಘಟನೆಯ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.