

ಬೆಳ್ತಂಗಡಿ; ಶುದ್ಧವಾದ ಗಾಳಿ, ಪರಿಸರಕ್ಕೆ ತಪೋವನ ಅತ್ಯಗತ್ಯ.ಪರಿಸರಕ್ಕೆ ಪೂಜೆ ಸಲ್ಲಿಸುವ ಸ್ಥಳದಲ್ಲಿ ದೇವರು ನೆಲೆಯಾಗುತ್ತಾನೆ. ಕಾಲಕಾಲಕ್ಕೆ ಆಗಬೇಕಾದ ಕೆಲಸಗಳ ಪುನರುಜ್ಜೀವನಕ್ಕೆ ಊರಿನ ಜನರು ಕೈಜೋಡಿಸಬೇಕು.ಇದು ಲೋಕಕ್ಕೆ ಅನುಕೂಲ ನೀಡುತ್ತದೆ ಎಂದು 1008 ಮಹಾಮಂಡಲೇಶ್ವರ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಶ್ರೀ ಗುರುದೇವ ಟ್ರಸ್ಟ್ ನ ಆದಿ ಪಜೀರಡ್ಕದ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ತಪೋವನ ನಿರ್ಮಾಣಕ್ಕೆ ಸಸ್ಯಗಳ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಜಿಲ್ಲೆಯಲ್ಲಿ ಸುಸಜ್ಜಿತ ತಪೋವನದ ಕೊರತೆ ಇದೆ.ಇಲ್ಲಿ ಋಷಿ,ಮುನಿಗಳಿಗೆ ಬೇಕಾದಂತಹ ಮಾದರಿಯ ತಪೋವನ ನಿರ್ಮಾಣವಾಗಲಿದೆ. ಸಾರ್ವಜನಿಕರ ನೆಮ್ಮದಿ ಶಾಂತಿಗೆ ತಪೋವನ ಪೂರಕ ವಾತಾವರಣ ನೀಡಲಿದೆ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ ಭಾರತೀಯ ಪರಂಪರೆಯಲ್ಲಿ ದೇವಾಲಯಗಳ ಕಲ್ಪನೆ ಅದ್ಭುತ. ದೇಗುಲಗಳ ಪರಿಸರಗಳಲ್ಲಿ ಪವಿತ್ರವನಗಳ ನಿರ್ಮಾಣ ಅತ್ಯಗತ್ಯ. ಕೆರೆ,ನದಿ,ಪುಷ್ಕರಣಿ,ಮರ ಗಿಡಗಳಿಗೆ ಪವಿತ್ರವಾದ ಸ್ಥಾನಮಾನ ಇದೆ. ಪ್ರಕೃತಿಯನ್ನು ಉಳಿಸುವ ಮೂಲಕ ನಮ್ಮ ನೆಲೆಯನ್ನು ಗಟ್ಟಿಗೊಳಿಸಬೇಕಾದದು ಅಗತ್ಯ ಎಂದು ಹೇಳಿದರು.
ತಹಸೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿ ಪ್ರಕೃತಿ ವಿಕೋಪಕ್ಕೆ ಪರಿಸರ ನಾಶ ಮುಖ್ಯ ಕಾರಣ. ದೇವರ ಹೆಸರಲ್ಲಿ ಕಾಡು ಉಳಿಸುವ ಸ್ವಾಮೀಜಿಗಳ ಈ ಕಾರ್ಯ ಎಲ್ಲರಿಗೂ ಮಾದರಿ ಎಂದು ಹೇಳಿದರು.

ಪ್ರಮುಖರಾದ ಪಿತಾಂಬರ ಹೇರಾಜೆ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್, ರಾಜ್ಯ ಕಾಂಗ್ರೆಸ್ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನಮಿತಾ ಕೆ.ಪೂಜಾರಿ, ಲೋಕೇಶ್ವರಿ ವಿನಯ ಚಂದ್ರ, ಬಂಗಾಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣಗೌಡ, ವಿ.ಆರ್. ನಾಯಕ್, ಕೇಶವ ಬೆಳಾಲು, ಎಂ.ಕೆ. ಪ್ರಸಾದ್,ಪದ್ಮನಾಭ
ಸಾಲಿಯನ್, ಸಂತೋಷ್ ಕುಮಾರ್ ಗುರುರಾಜ್ ಗುರುಪಳ್ಳ, ಅನಂತೇಶ್ ಚಡಗ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟಿ ತುಕಾರಾಂ ಸಾಲಿಯನ್ ಕಾರ್ಯಕ್ರಮ ನಿರೂಪಿಸಿದರು.
