Home ಅಪಘಾತ ಗುಂಡ್ಯ; ಖಾಸಗಿ ಬಸ್ ಪಲ್ಟಿ 16 ಮಂದಿಗೆ ಗಾಯ

ಗುಂಡ್ಯ; ಖಾಸಗಿ ಬಸ್ ಪಲ್ಟಿ 16 ಮಂದಿಗೆ ಗಾಯ

0


ಬೆಳ್ತಂಗಡಿ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪ ತಿರುವಿನಲ್ಲಿ ಶನಿವಾರ (ಜೂನ್ 7) ಬೆಳಗಿನ ಜಾವ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ರಸ್ತೆ ಬದಿಗೆ ಉರುಳಿದ್ದು, 16 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಘಟನೆಯ ವೇಳೆಗೆ ಬಸ್ಸಿನಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಹೆಚ್ಚಿನವರು ಹಬ್ಬದ ಪ್ರಯುಕ್ತ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದರು. ಬೆಳಗಿನ ಜಾವ ಪ್ರಯಾಣಿಕರು ನಿದ್ದೆಯ ಮುಂಪರೆಯಲ್ಲಿರುವ ಸಂದರ್ಭದಲ್ಲಿ ಗುಂಡ್ಯ ಸಮೀಪದ ಬರ್ಚಿನಹಳ್ಳಿ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಲಭಾಗಕ್ಕೆ ಪಲ್ಟಿ ಹೊಡೆದಿದೆ ಅದೃಷ್ಟವಶಾತ್ ಯಾವುದೇ ರೀತಿಯ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಘಟನೆಯಲ್ಲಿ ಗಾಯಗೊಂಡವರನ್ನು ಫಹದ್ (20) ಮೂಡಬಿದ್ರೆ, ರಂಝೀನ್(25) ಪರಂಗಿಪೇಟೆ, ಉಮ್ಮರ್ (53)ದೇರಳಕಟ್ಟೆ, ತಮೀನ್(19) ಪುತ್ತೂರು, ಇಷಾಮ್(19) ಸಾಲ್ಮರ ಪುತ್ತೂರು, ರುಕ್ಮಯ(24) ಉಪ್ಪಿನಂಗಡಿ, ಜಾಹಿರ್ (23) ಸಾಲೆತ್ತೂರು ಬಂಟ್ವಾಳ, ಶಮೀರ್ (28) ವಿಟ್ಲ, ಆನ್ಸರ್ (26) ವಿಟ್ಲ, ಸೋಮಶೇಖರ (55) ದಾಸರಪುರ ಬೆಂಗಳೂರು, ಶರತ್(35) ದಾಸರಪುರ ಬೆಂಗಳೂರು, ಡಾ. ಮಹಂತ್ ಗೌಡ (47) ನೆಲಮಂಗಲ ಬೆಂಗಳೂರು, ಸಿಮಾಕ್ (23), ಅಬ್ದುಲ್ ರಜೀದ್ (38) ಸಂಪ್ಯ ಪುತ್ತೂರು, ಪೌಝಿಲ್ (23), ಕೈಕಂಬ ಮೂಡುಬಿದ್ರೆ, ಅಲ್ತಾಫ್(28) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ತಕ್ಷಣ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಪ್ರಥಮ ಚಿಕಿತ್ಸೆಯನ್ನು ಪಡೆದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ 12 ಮಂದಿಯನ್ನು ಮಂಗಳೂರು ಐಲ್ಯಾಂಡ್ ಆಸ್ಪತ್ರೆಗೆ, ಓರ್ವನನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ಹಾಗೂ ಓರ್ವನನ್ನು ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನಾ ಸ್ಥಳದಿಂದ ಸುಮಾರು 8 ಆಂಬುಲೆನ್ಸ್‌ಗಳಲ್ಲಿ ಗಾಯಾಳುಗಳನ್ನು ಸ್ಥಳಾಂತರಿಸಲಾಯಿತು. ಇವರಲ್ಲಿ ಮೂವರು ತೀವ್ರ ಗಾಯ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು ಸಂಚಾರ ಸುಗಮಗೊಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version