Home ರಾಜಕೀಯ ಸಮಾಚಾರ ಪುರುಷ ಕಟ್ಟುವ ಆಚರಣೆಯಲ್ಲಿ ಮುಸ್ಲಿಂ ಧರ್ಮದ ಅವಹೇಳನ; ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ;...

ಪುರುಷ ಕಟ್ಟುವ ಆಚರಣೆಯಲ್ಲಿ ಮುಸ್ಲಿಂ ಧರ್ಮದ ಅವಹೇಳನ; ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ; ಎಸ್.ಡಿ.ಪಿ.ಐ ಎಚ್ಚರಿಕೆ

0

ಬೆಳ್ತಂಗಡಿ: ‘ತುಳುನಾಡಿನ ಐತಿಹಾಸಿಕ, ಪಾರಂಪರಿಕ ಪುರುಷ ಕಟ್ಟುವ ಆಚರಣೆಯಲ್ಲಿ ಮುಸ್ಲಿಂ ಧರ್ಮದ ಅವಹೇಳನ ಹಾಗೂ ಎಸ್.ಡಿ.ಪಿ.ಐ ಪಕ್ಷದ ಧ್ವಜ ಬಳಕೆ ಮಾಡಲಾಗಿದೆ. ಈ ಬಗೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳದೇ ಇದ್ದಲ್ಲಿ ವೇಣೂರು ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ನವಾಝ್ ಶರೀಫ್ ಕಟ್ಟೆ ಹೇಳಿದರು.

ಅವರು ಶನಿವಾರ ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೋವಿಂದೂರು ಬಳಿ ಪುರುಷ ಕಟ್ಟುವ ಸಾಂಪ್ರದಾಯಿಕ ಆಚರಣೆಯಲ್ಲಿ ಮುಸ್ಲಿಂ ಸಮುದಾಯದ ಅವಹೇಳನದ ಬಗ್ಗೆ ಏ.12 ರಂದೇ ದೂರು ನೀಡಲಾಗಿತ್ತು. ಆದರೆ ಪೊಲೀಸರು ಪ್ರಕರಣ ದಾಖಲಿಸದೇ ಇದ್ದುದರಿಂದ ಏ.14 ರಂದು ಪೆರಾಡಿಯಲ್ಲಿ ಮತ್ತೆ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಅವಹೇಳನ ನಡೆಯಿತು. ಪುರುಷ ಕಟ್ಟುವ ಆಚರಣೆಯ ಹಿನ್ನೆಲೆ ತಿಳಿಯದವರು ಧರ್ಮ ಧರ್ಮಗಳ ಮಧ್ಯೆ ಶಾಂತಿ ಕದುಡುವ ಪಿತೂರಿಯನ್ನಿಟ್ಟುಕೊಂಡು ಈ ರೀತಿ ಮಾಡಿದ್ದಾರೆ’ ಎಂದು ಆರೋಪಿಸಿದರು.

10 ನೇ ಶತಮಾನದಿಂದ ಆಚರಣೆಯಲ್ಲಿರುವ ಪುರುಷ ಕಟ್ಟುವ ಕ್ರಮದಲ್ಲಿ ಬೊಳ್ಳು ಕಲ್ಲು ಸಾಹೇಬ ವೇಷದಲ್ಲಿ ಮುಸ್ಲಿಂ ವೇಷ ಧರಿಸಿ ಪೂಜಿಸಿ ಗೌರವಿಸುವ ಕ್ರಮವಿದೆ. ಆದರೆ ಈಚಿನ ಕೆಲವು ವರ್ಷಗಳಲ್ಲಿ ಒಂದು ಸಮುದಾಯವನ್ನು, ಮಹಮ್ಮದ್ ಪೈಗಂಬರ್, ಪ್ರವಾದಿ ಅಝಾನ್, ಮುಸ್ಲಿಂ ಮಹಿಳೆಯರ ಅವಮಾನ ಮಾಡುವ ರೀತಿಯಲ್ಲಿ ಅದು ನಡೆಯುತ್ತಿರುವುದು ವಿಪರ್ಯಾಸ. ಇದು ಮುಂದುವರಿದು ಈಚೆಗೆ ಎಸ್.ಡಿ.ಪಿ.ಐ. ಧ್ವಜವನ್ನು ಕಳ್ಳತನ ಮಾಡಿ ಪುರುಷ ಕಟ್ಟುವ ಸಾಂಪ್ರಾದಾಯಿಕ ಆಚರಣೆಯಲ್ಲಿ ಬಳಕೆ ಮಾಡಿರುವುದು ದುರಂತ. ಇದು ಎರಡು ಧರ್ಮಗಳ ನಡುವೆ ಅಶಾಂತಿ ಸೃಷ್ಟಿ ಮಾಡುವ ಕೆಲಸವಾಗಿರುವುದು ಸ್ಪಷ್ಟವಾಗಿದೆ.

‘ಈ ಹಿಂದೆ ನಾವೂರಿನಲ್ಲೂ ಮುಸ್ಲಿಂ ಸಮುದಾಯದ ಅವಹೇಳನ ಮಾಡಿದ್ದ ಸಂದರ್ಭದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆ ಸಂದರ್ಭ ಅದರ ಬಗೆಗೆ ಕ್ರಮ ತಗೊಂಡು ನಿಗಾ ವಹಿಸಿದ್ದರೆ ಇಂತಹ ಘಟನೆ ಮರುಕಲಿಸುತ್ತಿರಲಿಲ್ಲ. ಪ್ರಕರಣದ ಆರೋಪಿಗಳು ಈ ಹಿಂದೆ ಬೇರೆ ಬೇರೆ ಕ್ರಿಮಿನಲ್ ಘಟನೆಗಳಲ್ಲಿ ಪ್ರಕರಣ ಇರುವವರೇ ಆಗಿದ್ದಾರೆ’ ಎಂದರು.

‘ಪುರುಷ ಕಟ್ಟುವ ಆಚರಣೆಯ ಮೂಲಕ ಹಿಂದೂ ಸಮುದಾಯಕ್ಕೆ ಸಾಂಪ್ರದಾಯಿಕ ಆಚರಣೆಯ ಮಹತ್ವ ತಿಳಿಸಬೇಕೇ ಹೊರತು ಸಮುದಾಯಗಳ ಮಧ್ಯೆ ಸಂಘರ್ಷದ ಹಾದಿಯನ್ನಲ್ಲ. ಹಾಗಾಗಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಾಮಾಜಿಕ ನ್ಯಾಯದ ಕಡೆಗೆ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಪೊಲೀಸರು ಆರೋಪಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಪುರುಷ ಕಟ್ಟುವ ಸಂದರ್ಭದಲ್ಲಿ ಅದರ ಮುಖಂಡರ ಸಭೆ ಕರೆದು ಅವರಿಗೆ ಅದರ ಇತಿಹಾಸ ತಿಳಿಸಿ ಸರಿಯಾದ ತಿಳುವಳಿಕೆ ನೀಡಬೇಕು’ ಎಂದರು

ಪತ್ರಿಕಾ ಗೋಷ್ಠಿಯಲ್ಲಿ ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಕ್ಟರ್ ಬೆಳ್ತಂಗಡಿ, ಉಪಾಧ್ಯಕ್ಷ ನಿಶಾರ್ ಕುದ್ರಡ್ಕ ಜಿಲ್ಲಾ ಸದಸ್ಯರಾದ ಮಹಮ್ಮದ್ ಕಬೀರ್, ಹನೀಫ್ ಪುಂಜಾಲಕಟ್ಟೆ, , ವೇಣೂರು ವಲಯ ಅಧ್ಯಕ್ಷ ಆಶ್ರಫ್‌ ಬದ್ಯಾರು ಇದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version